ಕುಣಿಗಲ್: ಹಳೆ ದ್ವೇಷದ ಹಿನ್ನೆಲೆಯಲ್ಲಿ ಅಪಘಾತದ ನೆಪದಲ್ಲಿ ರೌಡಿ ಶೀಟರ್ನನ್ನು ಸೋಮವಾರ ಸಂಜೆ ಕೊಲೆ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳನ್ನು 48 ಗಂಟೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ಬಾಗೇನಹಳ್ಳಿ ಗ್ರಾಮದ ರಾಮಚಂದ್ರ (29) ಅವರಿಗೆ ಅಪರಿಚಿತ ಕಾರು ಡಿಕ್ಕಿ ಹೊಡೆದ ಪರಿಣಾಮ ಸೋಮವಾರ ರಾತ್ರಿ ಮೃತಪಟ್ಟಿದ್ದರು. ಘಟನೆ ಬಗ್ಗೆ ಗ್ರಾಮಸ್ಥರು, ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು.
ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಕೊಲೆ ಎನ್ನುವುದು ತಿಳಿದುಬಂದಿದೆ.
ಕೊತ್ತಗೆರೆ ಹೋಬಳಿ ಕೊತ್ತಗೆರೆಪಾಳ್ಯದ ಶ್ರೀನಿವಾಸ, ಉಮೇಶ, ಬಿದನಗೆರೆ ಶಿವರಾಮು, ಚನ್ನಪ್ಪಗೌಡನ ಪಾಳ್ಯದ ಗುರುಮೂರ್ತಿ, ಸೊಬಾಗನಹಳ್ಳಿಯ ಲಕ್ಷ್ಮಣ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಶಿವರಾಮು ಮತ್ತು ಶ್ರೀನಿವಾಸ ನಡುವೆ ಜಗಳವಾಗಿ ಚಾಕುವಿನಿಂದ ಇರಿಯಲಾಗಿದ್ದು, ಪ್ರಕರಣ ದಾಖಲಾಗಿತ್ತು. ದ್ವೇಷ ಮುಂದುವರೆದಿರುವುದು ಘಟನೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಿವಾಸ್ ಮತ್ತು ತಂಡ ಸೋಮವಾರ ಸಂಜೆ ಶಿವರಾಮು ಬೈಕ್ನಲ್ಲಿ ಸ್ವಗ್ರಾಮಕ್ಕೆ ಹೋಗುವಾಗ ಕಾರಿನಲ್ಲಿ ಹಿಂಬಾಲಿಸಿ ಬಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದರು.
ಡಿವೈಎಸ್ಪಿ ಓಂ ಪ್ರಕಾಶ್, ಸಿಪಿಐ ನವೀನ್ ಗೌಡ, ಮಾದ್ಯಾನಾಯಕ್, ಪಿಎಸ್ಐ ಕೃಷ್ಣಕುಮಾರ್, ಸಿಬ್ಬಂದಿ ನಟರಾಜು, ಯೋಗಿಶ್, ಹನುಮಂತರಾಜು, ಪ್ರಕಾಶ್, ಶ್ರೀಧರ್, ನಂದೀಶ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.