ತುಮಕೂರು: ರೈತರ ಸಮಸ್ಯೆಗೆ ಸ್ಪಂದಿಸುವ, ಅರಣ್ಯ, ಜೀವ ವೈವಿಧ್ಯ ರಕ್ಷಣೆಗಾಗಿ ಪ್ರಗತಿಪರ ರೈತರ ಹಾಗೂ ದೇವರಾಯನ ದುರ್ಗ ಜೀವ ವೈವಿಧ್ಯತೆಗಳ ಹಿತರಕ್ಷಣಾ ಸಮಿತಿ ರಚಿಸಲಾಗಿದ್ದು, ಅ. 27ರಂದು ನಗರದಲ್ಲಿ ಸಮಿತಿಗೆ ಚಾಲನೆ ನೀಡಲಾಗುತ್ತದೆ.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಮಿತಿ ಉದ್ಘಾಟಿಸಲಿದ್ದಾರೆ. ಲೇಖಕಿ ಬಿ.ಟಿ.ಲಲಿತಾ ನಾಯಕ್ ಸೇರಿ ಇತರರು ಭಾಗವಹಿಸಲಿದ್ದಾರೆ ಎಂದು ಹೈಕೋರ್ಟ್ ವಕೀಲ ರಮೇಶ್ನಾಯಕ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಒಂದು ಟಿ.ಸಿ ಕೆಟ್ಟರೆ ಅದನ್ನು ಬದಲಾಯಿಸಲು, ಕೃಷಿ ಜಮೀನಿನ ಪೌತಿ ಖಾತೆ ಮಾಡಿಸಲು, ರಸಗೊಬ್ಬರ, ಬಿತ್ತನೆ ಬೀಜ ಪಡೆಯಲು ರೈತರು ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಅಧಿಕಾರಿಗಳು ರೈತರ ಸಮಸ್ಯೆ ಬಗೆಹರಿಸಲು ಕಾಳಜಿ ತೋರುತ್ತಿಲ್ಲ. ಶಾಸಕರ ಶಿಫಾರಸಿಗೆ ಕಾಯುತ್ತಾರೆ. ಇಂತಹ ಅನೇಕ ಪ್ರಕರಣಗಳಲ್ಲಿ ಸಮಿತಿ ರೈತರಿಗೆ ನೆರವಾಗಿದೆ ಎಂದರು.
ಮಣ್ಣು ಹಾಗೂ ನೀರು ಕೃಷಿಯ ಜೀವ ಸೆಲೆಯಾಗಿದ್ದು, ಇವುಗಳ ರಕ್ಷಣೆಯಾಗಬೇಕು. ಸಮಿತಿ ತುಮಕೂರು ತಾಲ್ಲೂಕಿನ 48 ಗ್ರಾಮಗಳ ರೈತರಲ್ಲಿ ಅರಿವು ಮೂಡಿಸಲಿದೆ. ಈ ಪೈಕಿ 23 ಹಳ್ಳಿಗಳಲ್ಲಿ ರೈತರ ಒಕ್ಕೂಟ ರಚಿಸಲಾಗಿದೆ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಬಂಡಿಹಳ್ಳಿ ಬಿ.ಆರ್.ರವೀಂದ್ರ, ಮುಖಂಡರಾದ ನರಸಿಂಹಮೂರ್ತಿ, ಪುಟ್ಟರಾಜು ಉಪನ್ಯಾಸಕ ರಾಜಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.