ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯಬಹುದು ಎಂಬ ಆಮಿಷಕ್ಕೆ ಒಳಗಾಗಿ ವೈದ್ಯ, ನಗರದ ಎಸ್.ಎಸ್.ಪುರಂ ನಿವಾಸಿ ಇಂದುಶೇಖರ್ ಸಿಂಗ್ ಎಂಬುವರು ₹17 ಲಕ್ಷ ಮೋಸ ಹೋಗಿದ್ದಾರೆ.
ಸೈಬರ್ ಆರೋಪಿಗಳು ವಾಟ್ಸ್ ಆ್ಯಪ್ ಮುಖಾಂತರ ಪರಿಚಯಿಸಿಕೊಂಡು ‘ಬಿ5/ಕ್ಯಾಪಿಟಲ್ ಗೇನ್ಸ್ ಇಂಡಿಯಾ’ ಎಂಬ ಗ್ರೂಪ್ನಲ್ಲಿ ಷೇರು ಮಾರುಕಟ್ಟೆಯ ಮಾಹಿತಿ ಹಂಚಿಕೊಂಡಿದ್ದಾರೆ. ನಂತರ ಅವರನ್ನು ‘ಗೋಲ್ಡನ್ ಸಚಸ್ ಸರ್ವೀಸ್ 20’ ಗ್ರೂಪ್ಗೆ ಸೇರಿಸಿದ್ದಾರೆ. ‘ಇಂಟರ್ನೆಟ್ ಇಕ್ವಿಟಿ ಅಕೌಂಟ್’ ತೆರೆಯಲು ₹2 ಲಕ್ಷ ಹಣ ಹಾಕುವಂತೆ ತಿಳಿಸಿದ್ದು, ಅದರಂತೆ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದಾರೆ.
ಖಾತೆ ಆರಂಭಿಸಿದ್ದು ಹೆಚ್ಚಿನ ಹಣ ಹೂಡಿಕೆ ಮಾಡಿ ಒಳ್ಳೆಯ ಲಾಭಾಂಶ ಪಡೆಯಬಹುದು ಎಂದು ತಿಳಿಸಿದ್ದಾರೆ. ಇದನ್ನು ನಂಬಿ ಹಂತ ಹಂತವಾಗಿ ₹15 ಲಕ್ಷ ಹಣ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಶೇಖರ್ ಸಿಂಗ್ ಅವರಿಂದ ಒಟ್ಟು ₹17 ಲಕ್ಷ ಹಾಕಿಸಿಕೊಂಡಿದ್ದಾರೆ. ಬೇರೆ ಬೇರೆ ಖಾತೆಗಳಿಗೆ ಹಣ ಹಾಕಿಸಿಕೊಂಡಿದ್ದರಿಂದ ಅನುಮಾನಗೊಂಡು ಹಣ ವಾಪಸ್ ಕೊಡುವಂತೆ ಕೇಳಿದಾಗ ಹಣ ನೀಡದೆ ವಂಚಿಸಿದ್ದಾರೆ. ಲಾಭದ ಹೆಸರಲ್ಲಿ ವಂಚಿಸಿದವರನ್ನು ಪತ್ತೆ ಹಚ್ಚುವಂತೆ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.