ತುಮಕೂರು: ಕೇಂದ್ರ ಸರ್ಕಾರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ₹14.50 ಲಕ್ಷ ವಂಚಿಸಿದ ಆರೋಪದ ಮೇರೆಗೆ ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿಗಳಾದ ಆರ್.ಪ್ರಕಾಶ್ ಹಾಗೂ ಅವರ ಪತ್ನಿ ಮಧು ಅವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಧುಗಿರಿ ತಾಲ್ಲೂಕಿನ ಸಜ್ಜೆ ಹೊಸಹಳ್ಳಿ ನಿವಾಸಿ ಟಿ.ಎಚ್.ಪ್ರಕಾಶ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
‘ಸ್ನೇಹಿತ ಕಾಂತರಾಜು ಮೂಲಕ ಆರ್.ಪ್ರಕಾಶ್, ಮಧು ಪರಿಚಯವಾಗಿತ್ತು. ನನ್ನ ಪತ್ನಿ, ಸಹೋದರ ಮತ್ತು ಇನ್ನಿಬ್ಬರು ಸ್ನೇಹಿತರಿಗೆ ಕೆಲಸ ಕೊಡಿಸುವಂತೆ ಕೇಳಿಕೊಂಡಿದ್ದೆ. ಒಂದು ಹುದ್ದೆಗೆ ₹8 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಅಡಿಕೆ ಮಾರಾಟ ಮಾಡಿ ಮನೆಯಲ್ಲಿ ಇಟ್ಟಿದ್ದ ಹಣವನ್ನು 2021ರ ಸೆ. 20ರಂದು ನಗರದ ಉಪನೋಂದಣಾಧಿಕಾರಿ ಕಚೇರಿ ಬಳಿ ಕೊಟ್ಟಿದ್ದೆ. ಹಣ ತೆಗೆದುಕೊಂಡು ಬೆಂಗಳೂರಿಗೆ ಹೋದವರು ಈವರೆಗೂ ಕೆಲಸ ಕೊಡಿಸಿಲ್ಲ’ ಎಂದು ಟಿ.ಎಚ್.ಪ್ರಕಾಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರ್.ಪ್ರಕಾಶ್ ನಿವಾಸಕ್ಕೆ ಹೋಗಿ ಹಣ ವಾಪಸ್ ಕೊಡುವಂತೆ ಕೇಳಿದಾಗ ‘ಕೆಲಸ ಕೊಡಿಸುವವರು ಈ ಬಾರಿ ಆಗುವುದಿಲ್ಲ ಎಂದು ಹೇಳಿದ್ದಾರೆ. ನಿಮ್ಮ ಹಣವನ್ನು 1 ತಿಂಗಳ ಒಳಗಡೆ ವಾಪಸ್ ನೀಡಲಾಗುವುದು’ ಎಂದು ತಿಳಿಸಿದ್ದರು. ನಂತರ ಈ ಹಣಕ್ಕೆ ಚೆಕ್ ನೀಡಿದ್ದರು. ಆದರೆ ಬ್ಯಾಂಕ್ ಖಾತೆಯಲ್ಲಿ ಹಣವೇ ಇರಲಿಲ್ಲ. ಈ ಬಗ್ಗೆ ಆರ್.ಪ್ರಕಾಶ್, ಮಧು ಅವರನ್ನು ಕೇಳಿದಾಗ ‘ಮನೆ ಹತ್ತಿರ ಬನ್ನಿ ನಿಮ್ಮ ಹಣ ನೀಡಲಾಗುವುದು’ ಎಂದಿದ್ದರು. ₹14.50 ಲಕ್ಷದಲ್ಲಿ ಈವರೆಗೆ ಕೇವಲ ₹2.50 ಲಕ್ಷ ಮಾತ್ರ ನಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.