ADVERTISEMENT

ತುಮಕೂರು: ಮೀಟರ್‌ ಬಡ್ಡಿ ದಂಧೆ ತಡೆಗೆ ಸಹಾಯವಾಣಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 5:53 IST
Last Updated 23 ಜನವರಿ 2024, 5:53 IST

ತುಮಕೂರು: ನಗರ ಒಳಗೊಂಡಂತೆ ಜಿಲ್ಲೆಯಲ್ಲಿ ಮೀಟರ್‌ ಬಡ್ಡಿ ದಂಧೆ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಹೊಸ ಸಹಾಯವಾಣಿ ಆರಂಭಿಸಿದೆ.

ಕಳೆದ ವರ್ಷದ ನ.26ರಂದು ಸಾಲ ನೀಡಿದವರ ಕಿರುಕುಳಕ್ಕೆ ಬೇಸತ್ತು, ಬಡ್ಡಿ ಹಣ ಕಟ್ಟಲು ಆಗದೆ ನಗರದ ಸದಾಶಿವ ನಗರದಲ್ಲಿ ದಂಪತಿ, ಮೂರು ಜನ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐದು ಜನ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ನಂತರ ಮೀಟರ್‌ ಬಡ್ಡಿ ದಂಧೆಗೆ ಕಡಿವಾಣ ಹಾಕಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತಿಳಿಸಿದ್ದರು. ಈಗ ಪೊಲೀಸ್‌ ಅಧಿಕಾರಿಗಳು ಬಡ್ಡಿ ದಂಧೆ ತಡೆಗೆ ಹೊಸ ಮಾರ್ಗ ಕಂಡುಕೊಂಡಿದ್ದಾರೆ.

‘ವರ್ಷಕ್ಕೆ ಶೇ 18ಕ್ಕಿಂತ ಜಾಸ್ತಿ ಬಡ್ಡಿ ವಿಧಿಸಿ ವ್ಯವಹಾರ ಮಾಡುವುದು ಕಾನೂನು ಬಾಹಿರ. ಯಾರಾದರು ಶೇ 18ಕ್ಕಿಂತ ಜಾಸ್ತಿ ಬಡ್ಡಿ ಕೇಳಿದರೆ ಸ್ಥಳೀಯ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌, ಇನ್‌ಸ್ಪೆಕ್ಟರ್‌, ಡಿವೈಎಸ್‌ಪಿ ಅಥವಾ ಜಿಲ್ಲಾ ಪೊಲೀಸ್‌ ಕಚೇರಿಯ ಸಹಾಯವಾಣಿ ಸಂಖ್ಯೆ 9480802900 ಸಂಪರ್ಕಿಸಿ ದೂರು ನೀಡಬಹುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌ ತಿಳಿಸಿದ್ದಾರೆ.

ADVERTISEMENT

ದೂರಿನ ಮೇರೆಗೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು. ಮೀಟರ್‌ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.