ADVERTISEMENT

ಚಿಕ್ಕನಾಯಕನಹಳ್ಳಿ: ಅಲೆಮಾರಿಗಳಿಗೆ ಮನೆ ಮಂಜೂರಾತಿ ಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 13:08 IST
Last Updated 1 ಅಕ್ಟೋಬರ್ 2024, 13:08 IST
ಅಲೆಮಾರಿ ಮಹಿಳೆಯರಿಗೆ ಮನೆ-ಮಂಜೂರಾತಿ ಪತ್ರ ವಿತರಿಸಿದ ಶಾಸಕ ಸಿ.ಬಿ. ಸುರೇಶ್ ಬಾಬು
ಅಲೆಮಾರಿ ಮಹಿಳೆಯರಿಗೆ ಮನೆ-ಮಂಜೂರಾತಿ ಪತ್ರ ವಿತರಿಸಿದ ಶಾಸಕ ಸಿ.ಬಿ. ಸುರೇಶ್ ಬಾಬು   

ಚಿಕ್ಕನಾಯಕನಹಳ್ಳಿ: ರಾಜ್ಯ ಸರ್ಕಾರದ ವಸತಿ ಇಲಾಖೆಯ ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಯಡಿ 27 ಮಂದಿ ಫಲಾನುಭವಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಪತ್ರ ನಮೂನೆ- 2ನ್ನು ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ. ಸುರೇಶ್ ಬಾಬು ವಿತರಿಸಿದರು.

ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡಗೆರೆ ವಸತಿ ಪ್ರದೇಶದಲ್ಲಿ ಎಸ್‌ಸಿ- ಎಸ್‌ಟಿ ಅಲೆಮಾರಿ ಸಮುದಾಯದವರಿಗೆ ಹಂಚಲಾಗಿದ್ದ ‌ನಿವೇಶನಗಳಲ್ಲಿ ಆಗಿರುವ ಮನೆ ಮಂಜೂರಾತಿ ಹಾಗೂ ಕಾಮಗಾರಿ ಪತ್ರದ ನಮೂನೆ-2ನ್ನು ತಾಲ್ಲೂಕು ಪಂಚಾಯಿತಿ ಹಾಗೂ ಕೆಂಕೆರೆ ಗ್ರಾಮ ಪಂಚಾಯಿತಿಯಿಂದ ಶಾಸಕರ ಮೂಲಕ ಹಕ್ಕುದಾರ ಅಲೆಮಾರಿಗಳಿಗೆ ವಿತರಿಸಲಾಯಿತು.

ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಂದಿಜೋಗಿ ರಾಜಣ್ಣ ಮಾತನಾಡಿ, ಹಳ್ಳಿ,ಹಳ್ಳಿ ತಿರುಗಿ ಹೇರ್‌ಪಿನ್, ಪ್ಲಾಸ್ಟಿಕ್ ಸಾಮಗ್ರಿ, ಮಕ್ಕಳ ಆಟಿಕೆ ಮಾರಿಕೊಂಡು ಹೊಟ್ಟೆ ಹೊರೆಯುತ್ತಿದ್ದ ಅಲೆಮಾರಿಗಳು ಈಗ ಆನ್‌ಲೈನ್ ಶಾಪಿಂಗ್ ಮತ್ತು ಹೋಮ್ ಡೆಲಿವರಿ ಕಾಲದಲ್ಲಿ ಏಗಲಾಗದೆ ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ಶಾಸಕರ ಬಳಿ ಅಳಲು ತೋಡಿಕೊಂಡರು.

ADVERTISEMENT

ಶಾಸಕ ಸಿ.ಬಿ. ಸುರೇಶ್ ಬಾಬು ಪ್ರತಿಕ್ರಿಯಿಸಿ, ಅಲೆಮಾರಿಗಳ ಉದ್ಯೋಗ ಹಾಗೂ ಜೀವನೋಪಾಯಕ್ಕೆ ಸಂಬಂಧಿಸಿದಂತೆ ವಿವರವಾಗಿ ಚರ್ಚಿಸಿ, ಶೀಘ್ರ ಪರಿಹಾರೋಪಾಯ ಕಂಡುಕೊಳ್ಳೋಣ ಎಂದು ಭರವಸೆ ನೀಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ದೊಡ್ಡಸಿದ್ದಯ್ಯ ಪ್ರತಿಕ್ರಿಯಿಸಿ, ತಾಲ್ಲೂಕು ಯೋಜನಾಧಿಕಾರಿ ಕೂಡಲೇ ಚರ್ಚಿಸಿ, ಅಲೆಮಾರಿ ಸಮುದಾಯದವರಿಗೆ ಕೌಶಲ ತರಬೇತಿ, ಸ್ವಸಹಾಯ ಗುಂಪು ಮತ್ತು ನಿರ್ದಿಷ್ಟವಾದ ಯಾವುದಾದರೂ ಒಂದು ಉತ್ಪಾದಕ ಸಾಮಗ್ರಿ, ಕೌಶಲಾಧಾರಿತ ಕಸುಬುದಾರಿಕೆ ತರಬೇತಿ ಕಾರ್ಯಾಗಾರಗಳಿಗೆ ಒತ್ತುಕೊಡುವ ಯೋಜನೆಯನ್ನು ಶೀಘ್ರ ರೂಪಿಸಲು ಸೂಚಿಸಿದರು.

ತಹಸೀಲ್ದಾರ್ ಕೆ.ಪುರಂದರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಿ. ದೊಡ್ಡಸಿದ್ಧಯ್ಯ, ಕೆಂಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಪ್ಪೇಸ್ವಾಮಿ, ಸ್ಥಳೀಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.