ತುಮಕೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದಿಂದ ಅ. 28ರಂದು ತಮಟೆ ಚಳವಳಿ ಹಮ್ಮಿಕೊಳ್ಳಲಾಗಿದೆ.
ಒಳಮೀಸಲಾತಿ ಜಾರಿ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನೀಡಿದೆ. ಆದರೆ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ತರಲು ಹಿಂದೇಟು ಹಾಕುತ್ತಿದ್ದು, ಸರ್ಕಾರದ ಮೇಲೆ ಒತ್ತಡ ತರುವ ಸಲುವಾಗಿ ತಮಟೆ ಚಳವಳಿ ನಡೆಸಲು ಶುಕ್ರವಾರ ನಗರದಲ್ಲಿ ನಡೆದ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲೆಯಲ್ಲಿ ಮಾದಿಗ ಸಮುದಾಯದಿಂದ ಒಳಮೀಸಲಾತಿ ಹೋರಾಟ ಮಾಡಿಕೊಂಡು ಬರಲಾಗಿದೆ. ಆದರೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಬಲಗೈ ಸಮುದಾಯ ನಮ್ಮ ಹೋರಾಟಕ್ಕೆ ಬೆಂಬಲವಾಗಿ ನಿಂತಿಲ್ಲ. ಬಲಗೈ ಸಮುದಾಯದವರು ಈಗಾಗಲೇ ಮೀಸಲಾತಿಯ ಬಹುಪಾಲು ಅನುಕೂಲ ಪಡೆದುಕೊಂಡಿದ್ದಾರೆ. ಅತ್ಯಂತ ಹೀನಾಯ ಸ್ಥಿತಿಯಲ್ಲಿರುವ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಬೇಕಾಗಿದೆ. ಹಾಗಾಗಿ ಮುಂಬರುವ ಎಲ್ಲಾ ಹೋರಾಟಗಳನ್ನು ಮಾದಿಗ ಸಮುದಾಯದ ಎಲ್ಲಾ ಉಪಪಂಗಡಗಳನ್ನು ಒಳಗೊಂಡ ‘ಐಕ್ಯ ವೇದಿಕೆ’ ಹೆಸರಿನಲ್ಲಿ ಮುನ್ನಡೆಸಲು ಒಮ್ಮತಕ್ಕೆ ಬರಲಾಯಿತು.
ಮಾದಿಗ ಸಮುದಾಯದ ಮುಖಂಡರಾದ ನರಸೀಯಪ್ಪ, ವೈ.ಎಚ್.ಹುಚ್ಚಯ್ಯ, ಡಿ.ಟಿ.ವೆಂಕಟೇಶ್, ಕೆಂಚಮಾರಯ್ಯ, ಡಾ.ಬಸವರಾಜು, ಡಾ.ಲಕ್ಷ್ಮಿಕಾಂತ್, ಪಾವಗಡ ಶ್ರೀರಾಮ್, ವೈ.ಟಿ.ಬಾಲಕೃಷ್ಣಪ್ಪ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.