ADVERTISEMENT

ಸಂಘಟನೆ ಹೆಸರಲ್ಲಿ ಬೆದರಿಕೆ: 3 ಬಂಧನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 4:57 IST
Last Updated 20 ಫೆಬ್ರುವರಿ 2024, 4:57 IST

ತುಮಕೂರು: ಪೆಟ್ರೋಲ್‌ ಬಂಕ್‌ ಮಾಲೀಕನಿಗೆ ವಿವಿಧ ಸಂಘಟನೆಗಳ ಹೆಸರು ಹೇಳಿಕೊಂಡು ಬೆದರಿಕೆ ಹಾಕಿ, ₹50 ಸಾವಿರ ನಗದು ಪಡೆದುಕೊಂಡಿದ್ದ ಆರೋಪದ ಮೇಲೆ ಮೂವರನ್ನು ಎಸ್‌ಇಪಿಎಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ಜನ ಸೈನ್ಯ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ, ಮರಳೂರು ದಿಣ್ಣೆಯ ಟಿ.ಎಸ್.ರಕ್ಷಿತ್‌ ಕುಮಾರ್‌ (33), ಉಪ್ಪಾರಹಳ್ಳಿ ಮಂಜುನಾಥ (46) ಮತ್ತು ಅರುಣ್‌ (54) ಬಂಧಿತರು.

ಫೆ. 17ರಂದು ಎಸ್.ಎಸ್.ಪುರಂ ಮುಖ್ಯರಸ್ತೆಯಲ್ಲಿರುವ ಶಿವ್‌ದೇವ್‌ ಪೆಟ್ರೋಲ್‌ ಬಂಕ್‌ಗೆ ಬಂದ ಈ ಮೂರು ಜನ ‘ನೀವು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದೀರಿ, ಪೆಟ್ರೋಲ್‌ ಬಂಕ್‌ ಸುಟ್ಟುಹಾಕಿ, ವ್ಯಾಪಾರ ಆಗದಂತೆ ಮಾಡುತ್ತೇವೆ. 200 ಜನರನ್ನು ಸೇರಿಸಿ ಗಲಾಟೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದ್ದರು. ನಂತರ ₹5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ₹50 ಸಾವಿರ ನಗದು ಪಡೆದುಕೊಂಡಿದ್ದರು’ ಎಂದು ಪೆಟ್ರೋಲ್‌ ಬಂಕ್‌ ಮಾಲೀಕ ಹೊಸ ಬಡಾವಣೆ ಠಾಣೆಗೆ ದೂರು ನೀಡಿದ್ದರು.

ADVERTISEMENT

ಆರೋಪಿಗಳ ಪತ್ತೆ ತಂಡ ರಚಿಸಲಾಗಿತ್ತು. ಹೊಸ ಬಡಾವಣೆ ಪೊಲೀಸ್‌ ಠಾಣೆ ಪಿಎಸ್‌ಐ ಎಚ್‌.ಡಿ.ವಿದ್ಯಾಶ್ರೀ, ಸಿಬ್ಬಂದಿಯಾದ ನೀಲಕಂಠಯ್ಯ, ಕುಮಾರಸ್ವಾಮಿ, ಮಂಜುನಾಥ, ಲೋಕೇಶ್, ನಿಜಾಮುದ್ದೀನ್ ಶಾ, ಈಶ್ವರ ಅರಕೆರಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.