ತುಮಕೂರು: ವಿಶ್ವ ಕವಿ ಕುವೆಂಪು ಸಾಹಿತ್ಯದ ಅಮೃತದ ಮಡುವಿನಲ್ಲಿ ನಾವೆಲ್ಲರೂ ಮೀಯಬೇಕು. ಅವರ ಬೆಳಕನ್ನು ಪಡೆಯಬೇಕು. ಅವರ ಹಾದಿಯಲ್ಲಿ ಸಾಗಬೇಕು ಎಂದು ನಿವೃತ್ತ ಉಪನಿರ್ದೇಶಕ ಎಚ್.ಕೆ.ನರಸಿಂಹಮೂರ್ತಿ ಹೇಳಿದರು.
ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ವಿಶ್ವಮಾನವ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ 'ಕುವೆಂಪು ಸಾಹಿತ್ಯದಲ್ಲಿ ವಿಶ್ವ ಮಾನವ ಸಂದೇಶ' ಕುರಿತು ಉಪನ್ಯಾಸ ನೀಡಿದರು.
ನಾಡಿನ ಸಮಸ್ತ ಜಾತಿಗಳಿಗೆ ಅವರು ಔಷಧಿ, ಮದ್ದು ಕೊಟ್ಟಿದ್ದಾರೆ. ಜಗತ್ತು ವಿಶ್ವ ಮಾನವನ ಕಡೆ ಸಾಗಿದರೆ ಮಾತ್ರ ಶಾಂತಿ ಸ್ಥಾಪನೆ ಸಾಧ್ಯ. ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ಸಮಾಜ ನಿರ್ಜನ ಪ್ರದೇಶವಾಗಿ ರೂಪುಗೊಳ್ಳುತ್ತದೆ ಎಂದು ಎಚ್ಚರಿಸಿದ್ದರು.
ಎಲ್ಲರು ನಿರಂಕುಶಮತಿಗಳಾಗಬೇಕು. ಸ್ವಾತಂತ್ರ್ಯ, ಮುಕ್ತಮತಿಗಳಾಗಬೇಕು ಎಂಬ ಸಂದೇಶ ಕೊಟ್ಟಿದ್ದಾರೆ. ಕುವೆಂಪು ಅವರ ಜಾತ್ಯತೀತ ಸಂದೇಶ, ಆದರ್ಶದ ಬದುಕನ್ನು ನಾವೆಲ್ಲರು ಅರಿತುಕೊಳ್ಳಬೇಕು. ಗೊಂದಲದ ಗೂಡಾಗಿರುವ ಇಂದಿನ ಸಮಾಜದಲ್ಲಿ ಕುವೆಂಪು ವಿಚಾರಗಳು ಪ್ರಸ್ತುತ ಎನಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಮನುಷ್ಯ ವಿಷಯ, ಜ್ಞಾನ ಸಂಗ್ರಹ ಮಾಡಿದಾಗ ಅವನಲ್ಲಿ 'ನಾನು, ನನ್ನದು' ಎಂಬ ಅಹಂ ಪ್ರಜ್ಞೆ ದೂರವಾಗಿ, ನನ್ನಂತೆ ಇತರರು ಎಂಬ ಭಾವನೆ ಮೂಡುತ್ತದೆ. ವಿಶ್ವ ಉಳಿಯಲು ಮಾನವ ಪ್ರಜ್ಞೆ, ಅರಿವು, ಜ್ಞಾನ ಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಚಂದ್ರಣ್ಣ, ‘ಕುವೆಂಪು ಸಂದೇಶಗಳು ಓದುಗರ ಮನ ಮುಟ್ಟುವಂತಿವೆ. ಈ ಹಿಂದೆ ಅವರನ್ನು ಭೇಟಿಯಾದಾಗ ಮಾನವ ಕುಲ ಉಳಿಯಲು ನಾವೆಲ್ಲ ನಮ್ಮ ಹೃದಯದಲ್ಲಿ ವಿಶ್ವ ಮಾನವ ಸಂದೇಶ ಇಟ್ಟುಕೊಂಡು ಬದುಕಬೇಕು ಎಂದು ತಿಳಿಸಿದ್ದರು ಎಂದು ಎಂದು ಕುವೆಂಪು ಮಾತುಗಳನ್ನು ನೆನಪಿಸಿಕೊಂಡರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಇತಿಹಾಸಕಾರ ಡಿ.ಎನ್.ಯೋಗೀಶ್ವರಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.