ತುಮಕೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆ ಸೋಮವಾರವೂ ಮುಂದುವರಿಯಿತು.
ಕೆಲವು ದಿನಗಳಿಂದ ಪ್ರತಿ ದಿನ ಸಂಜೆ ಮಳೆಯಾಗುತ್ತಿದ್ದು, ಸೋಮವಾರ ಸಂಜೆ 4 ಗಂಟೆಗೆ ಶುರುವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ನಗರದ ವಿವಿಧ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ಉಪ್ಪಾರಹಳ್ಳಿ ಮೇಲ್ಸೇತುವೆ ಬಳಿ ಟ್ರಾಫಿಕ್ ಸಮಸ್ಯೆಯಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೆಇಬಿ ಕಚೇರಿ ಮುಂಭಾಗದ ಹೊರಪೇಟೆ ರಸ್ತೆ ಮಳೆ ನೀರಿನಿಂದ ಕೆರೆಯಂತಾಗಿತ್ತು. ನೀರಿನ ಮಧ್ಯೆ ಕೆಟ್ಟು ನಿಂತಿದ್ದ ಆಟೊ, ಬೈಕ್ಗಳನ್ನು ಸವಾರರು ತಳ್ಳಿಕೊಂಡು ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು.
ಸರ್ಕಾರಿ ಕಚೇರಿ, ಕಾಲೇಜುಗಳು ಮುಗಿಯುವ ಸಮಯಕ್ಕೆ ಸರಿಯಾಗಿ ಮಳೆಯಾಯಿತು. ವಿದ್ಯಾರ್ಥಿಗಳು, ಸಾರ್ವಜನಿಕರು ಮಳೆಯಲ್ಲಿ ಕೊಡೆ ಹಿಡಿದು ಹೋಗುತ್ತಿರುವುದು ಕಂಡು ಬಂತು. ಭಾನುವಾರ ರಾತ್ರಿಯೂ ಸಾಧಾರಣ ಮಳೆ ಬಿದ್ದಿತ್ತು. ಸಂಜೆ 6ರಿಂದ ರಾತ್ರಿ 9 ಗಂಟೆಯ ತನಕ ಜಿಟಿ ಜಿಟಿ ಮಳೆಯಾಯಿತು. ಪ್ರಾರಂಭದಲ್ಲಿ ಬಿರುಸು ಪಡೆದುಕೊಂಡು ನಂತರ ನಿಧಾನವಾಗಿ ಸುರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.