ಮಧುಗಿರಿ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ಮತದಾರರ ಪಟ್ಟಿಯಲ್ಲಿರುವ ಮರಣ ಹೊಂದಿರುವ ಸದಸ್ಯರ ಹೆಸರುಗಳನ್ನು ಕೈಬಿಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಒತ್ತಾಯಿಸಿದರು.
ಪಟ್ಟಣದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನಿಂದ ಭಾನುವಾರ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ಸಭೆಯಲ್ಲಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ತಾಲ್ಲೂಕು ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಚುನಾವಣೆಗಾಗಿ ಸದಸ್ಯರನ್ನು ಮಾಡದೆ ಕನ್ನಡವನ್ನು ಉಳಿಸಿ ಬೆಳಸುವಂತಹವರನ್ನು ಸದಸ್ಯರನ್ನಾಗಿ ಮಾಡಬೇಕು ಎಂದರು.
ಕಸಾಪ ಸದಸ್ಯತ್ವ ಹೊಂದಿ ಮೂರು ವರ್ಷಗಳ ನಂತರ ಅವರಿಗೆ ಮತದಾನದ ಅರ್ಹತೆ ನೀಡಲಾಗುತ್ತದೆ. ಇದರ ಬಗ್ಗೆ ಕೇಂದ್ರದಲ್ಲಿ ಚರ್ಚೆಗಳು ನಡೆಯುತ್ತಿವೆ. ಶೀಘ್ರ ತೀರ್ಮಾನವಾಗುತ್ತದೆ ಎಂದರು.
ಪಟ್ಟಣದಲ್ಲಿ ನಿರ್ಮಾಣವಾಗಿರುವ ಕನ್ನಡ ಸಾಹಿತ್ಯ ಪರಿಷತ್ ಭವನ ಜಿಲ್ಲೆಗೆ ಮಾದರಿಯಾಗಿದೆ. ಮತ್ತಷ್ಟು ಕಾರ್ಯಕ್ರಮಗಳನ್ನು ಮಾಡಬೇಕು ಎಂದು ತಾಲ್ಲೂಕು ಅಧ್ಯಕ್ಷರಿಗೆ ಸೂಚನೆ ನೀಡಿದರು.
ಪುರಸಭೆ ಸದಸ್ಯ ಆರ್.ಸುರೇಶ್, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಯೋಗಿಶ್ವರಪ್ಪ, ಕಂಟನಗೆರೆ ಸಣ್ಣ ಹೊನ್ನಯ್ಯ, ತಾಲ್ಲೂಕು ಅಧ್ಯಕ್ಷೆ ಸಹನಾ ನಾಗೇಶ್, ಮಾಜಿ ಅಧ್ಯಕ್ಷರಾದ ಮಲನ ಮೂರ್ತಿ, ಪ್ರೊ.ಕೃಷ್ಣಪ್ಪ, ಕಾರ್ಯದರ್ಶಿ ರಂಗಧಾಮಯ್ಯ, ಖಜಾಂಚಿ ವೆಂಕಟೇಶ್ ಪ್ರಸಾದ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.