ತುಮಕೂರು: ಕಿತ್ತೂರು ಕ್ರಾಂತಿಯ 200ನೇ ವರ್ಷಾಚರಣೆ ಪ್ರಯುಕ್ತ ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರಿನಲ್ಲಿ ಫೆ. 21ರಂದು ಬೃಹತ್ ರ್ಯಾಲಿ ಏರ್ಪಡಿಸಿದ್ದು, ಜಿಲ್ಲೆಯಿಂದ ‘ಕಿತ್ತೂರು ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲೆಯ ಮಹಿಳೆಯರು ಕಿತ್ತೂರಿಗೆ ಪ್ರಯಾಣ ಬೆಳಸಲಿದ್ದಾರೆ. ಬೃಹತ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಸಂಖ್ಯೆಯ ಮಹಿಳೆಯರು ಭಾಗವಹಿಸುವಂತೆ ಒಕ್ಕೂಟದ ಬಾ.ಹ.ರಮಾಕುಮಾರಿ, ಜಿ.ಮಲ್ಲಿಕಾ ಬಸವರಾಜು, ಡಿ.ಅರುಂಧತಿ, ರಾಣಿ ಚಂದ್ರಶೇಖರ್, ದೀಪಿಕಾ ಮರಳೂರು ಮನವಿ ಮಾಡಿದ್ದಾರೆ.
ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಲು, ದ್ವೇಷ ಅಳಿಸಿ, ಪ್ರೀತಿ ಮೂಡಿಸುವುದಕ್ಕೆ ದೇಶದ ವಿವಿಧ ಭಾಗಗಳಿಂದ ಸುಮಾರು 3 ಸಾವಿರ ಜನ ಜಾಥಾದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಹೊರಟು ಕಿತ್ತೂರು ಸೇರುತ್ತಾರೆ. ‘ನಾನೂ ರಾಣಿಚನ್ನಮ್ಮ’ ಎಂಬ ಘೋಷಣೆ ಮೊಳಗಲಿದೆ ಎಂದು ತಿಳಿಸಿದ್ದಾರೆ.
‘ಸ್ವಾತಂತ್ರ್ಯ, ಸಮಾನತೆ, ನ್ಯಾಯ ಹಾಗೂ ಸೌಹಾರ್ದ ಬದುಕಿಗಾಗಿ ಇಡೀ ಭಾರತದ ಮಹಿಳೆಯರು ಒಂದೆಡೆ ಸೇರಲಿದ್ದಾರೆ. ಹೋರಾಟ ಮತ್ತು ಸಾಮಾಜಿಕ ಸಂಘಟನೆಯಲ್ಲಿ ನಿರತರಾಗಿರುವ ಪ್ರಮುಖರು ಕಿತ್ತೂರಿನಲ್ಲಿ ನಡೆಯುವ ಜಾಥಾದಲ್ಲಿ ಭಾಗವಹಿಸಲಿದ್ದಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.