ADVERTISEMENT

ತಿಪಟೂರು: ಕ್ರೀಡಾಂಗಣದಲ್ಲಿ ಸೌಕರ್ಯ ಕೊರತೆ

ವ್ಯವಸ್ಥಿತ ಕ್ರೀಡಾಂಗಣಕ್ಕೆ ಎದುರು ನೋಡುತ್ತಿರುವ ಕ್ರೀಡಾಪಟುಗಳು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 6:55 IST
Last Updated 24 ಆಗಸ್ಟ್ 2024, 6:55 IST
ಕಲ್ಪತರು ಕ್ರೀಡಾಂಗಣದ ಓಟದ ಟ್ರ್ಯಾಕ್‌ನಲ್ಲಿ ನೀರು ನಿಂತಿದೆ
ಕಲ್ಪತರು ಕ್ರೀಡಾಂಗಣದ ಓಟದ ಟ್ರ್ಯಾಕ್‌ನಲ್ಲಿ ನೀರು ನಿಂತಿದೆ   

ತಿಪಟೂರು: ನಗರದ ಕಲ್ಪತರು ಕ್ರೀಡಾಂಗಣ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಕ್ರೀಡಾಪಟುಗಳು ತರಬೇತಿಗಾಗಿ ಬೇರೆಡೆ ವಲಸೆ ಹೋಗುವಂತಾಗಿದೆ.

ಹಲವು ದಶಕಗಳಿಂದ ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ಕೀರ್ತಿ ತಾಲ್ಲೂಕಿಗಿದೆ. ಆದರೆ ಈಗ ಕ್ರೀಡಾಪಟುಗಳು ವ್ಯವಸ್ಥಿತ ಅಭ್ಯಾಸಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ.

ಆರು ಎಕರೆ ವಿಸ್ತೀರ್ಣವುಳ್ಳ ಕಲ್ಪತರು ಕ್ರೀಡಾಂಗಣದಲ್ಲಿ ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಸಾವಿರಾರು ಜನರು ವಾಯುವಿಹಾರಕ್ಕೆ, ಕ್ರೀಡಾಭ್ಯಾಸಕ್ಕೆ ಬರುತ್ತಿದ್ದು ಇವರಿಗೆ ಸರಿಯಾದ ಟ್ರ್ಯಾಕ್‌ ವ್ಯವಸ್ಥೆ ಇಲ್ಲ.

ADVERTISEMENT

ಮಳೆ ಬಂದಾಗ ಟ್ರ್ಯಾಕ್‌ ಮಧ್ಯೆ ನೀರು ನಿಲ್ಲುತ್ತಿದ್ದು, ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಟ್ರ್ಯಾಕ್‌ ಸುತ್ತ ಅಳವಡಿಸಿರುವ ಬಾಕ್ಸ್ ಚರಂಡಿಗಳು ಕಸ ಹಾಗೂ ಮಣ್ಣಿನಿಂದ ತುಂಬಿವೆ. ಮಳೆ ನೀರು ಅಲ್ಲಿಯೇ ಶೇಖರಣೆಯಾಗಿ ಹೋರ ಹೋಗಲು ಸರಿಯಾದ ಯುಜಿಡಿ ಸಂಪರ್ಕ ಇಲ್ಲದೆ ಟ್ರ್ಯಾಕ್‌ ಮಧ್ಯೆಯೇ ನಿಲ್ಲುತ್ತಿದೆ.

ಕ್ರೀಡಾಂಗಣದಲ್ಲಿನ ಫೇಡ್ ಲೈಟ್ ವ್ಯವಸ್ಥೆ ಅಸಮರ್ಪಕವಾಗಿದ್ದು ಮಿಂಚು ಹುಳುವಿನಂತೆ ಬೆಳಕು ಬೀರುತ್ತಿದೆ. ರಾತ್ರಿ ವಾಕಿಂಗ್ ಮಾಡುವ ಸಾರ್ವಜನಿಕರು ಕತ್ತಲೆಯಲ್ಲಿ ಕಾಲ ಕಳೆಯಬೇಕಿದೆ. ಕುಡುಕರ ಹಾವಳಿ ಹೆಚ್ಚಾಗಿ, ಅಲ್ಲಲ್ಲಿ ಮದ್ಯದ ಬಾಟಲಿಗಳು ಕಾಣ ಸಿಗುತ್ತವೆ.

ವೀಕ್ಷಕರ ಗ್ಯಾಲರಿ ಆಸನದ ಸ್ಥಿತಿ

ವಾರಕೊಮ್ಮೆಯಾದರೂ ಕ್ರೀಡಾಂಗಣದಲ್ಲಿ ಯಾವುದಾದರೂ ಕ್ರೀಡಾ ಚಟುವಟಿಕೆಗಳು ನಡೆಯುತ್ತಿರುತ್ತವೆ. ವೀಕ್ಷಕರು ಕುಳಿತುಕೊಳ್ಳುವ ಗ್ಯಾಲರಿ ಆಸನದ ಕಲ್ಲು ಕಳಚಿ ಬೀಳುತ್ತಿವೆ. ಕ್ರೀಡಾಂಗಣದ ಒಂದು ಭಾಗದಲ್ಲಿ ಮಾತ್ರ ವೀಕ್ಷಕರ ಗ್ಯಾಲರಿಗೆ ನೆರಳು ಹಾಗೂ ಮಳೆಯಿಂದ ಆಶ್ರಯ ಪಡೆಯಬಹುದು. ಉಳಿದ ಮುಕ್ಕಾಲು ಭಾಗದಲ್ಲಿ ಯಾವುದೇ ಚಾವಣಿ ಇಲ್ಲ.

ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡವ ಕ್ರೀಡಾಪಟುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶಾಲಾ– ಕಾಲೇಜುಗಳ ಶೈಕ್ಷಣಿಕ ಸಾಲಿನ ಕ್ರೀಡಾಕೂಟ ಆರಂಭವಾಗಿದೆ. ಕೆಸರು ಗದ್ದೆಯಂತಾಗಿರುವ ಓಟದ ಟ್ರ್ಯಾಕ್‌ನಲ್ಲಿಯೇ ಸ್ಪರ್ಧೆ ಆಯೋಜಿಸಿ ನೀರು ನಿಂತ ಜಾಗದಲ್ಲಿ ಬಿದ್ದು ಎದ್ದು ಸ್ವರ್ಧೆಯಲ್ಲಿ ಭಾಗವಹಿಸಬೇಕಾದ ಅನಿವಾರ್ಯವಿದೆ.

ಕಲ್ಪತರು ಕ್ರೀಡಾಂಗಣದ ಓಟದ ಟ್ರ್ಯಾಕ್‌ನಲ್ಲಿ ನೀರು ನಿಂತಿದೆ
ಕ್ರೀಡಾಂಗಣದ ಅವ್ಯವಸ್ಥೆ ಬಗ್ಗೆ ಇಲಾಖೆ ಗಮನಕ್ಕೆ ತಂದು ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು.
ರೋಹಿತ್‌ ಗಂಗಾಧರ್ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ
ಮಳೆ ನೀರು ತುಂಬಿದ್ದ ಸಂದರ್ಭದಲ್ಲಿ ಓಟದ ಸ್ಪರ್ಧೆ ಆಯೋಜನೆ ಮಾಡಿದಾಗ ಮಕ್ಕಳು ಆಯಾತಪ್ಪಿ ಬಿದ್ದು ತೊಂದರೆ ಅನುಭವಿಸುತ್ತೇವೆ. ಕ್ರೀಡಾಂಗಣದ ಸುವ್ಯವಸ್ಥೆ ಕಾಪಾಡುವುದು ಮಕ್ಕಳ ರಕ್ಷಣೆ ಮಾಡುವುದು ಅದ್ಯ ಕರ್ತವ್ಯ.
ಶರತ್‌ಕುಮಾರ್ ಪೋಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.