ಪಾವಗಡ: ತುಮಕೂರು ರಸ್ತೆ ಕಣಿವೆ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವ ಪ್ರಯುಕ್ತ ದೇಗುಲವನ್ನು ವಿದ್ಯುತ್ ದೀಪ, ತಳಿರು ತೋರಣಗಳೊಂದಿಗೆ ಅಲಂಕರಿಸಲಾಗಿತ್ತು.
ಸ್ವಸ್ತಿ ವಾಚನ, ಪಂಚಾಮೃತ ಅಭಿಷೇಕ, ಹೋಮ, ಪೂರ್ಣಾಹುತಿ, ಪುಷ್ಪಾಲಂಕಾರ, ಉತ್ಸವಾದಿ ಪೂಜಾ ಕಾರ್ಯಕ್ರಮ ನಡೆಯಿತು. ಭಾನುವಾರ ರಾತ್ರಿ ನಡೆದ ಲಕ್ಷ್ಮಿನರಸಿಂಹಸ್ವಾಮಿ ಕಲ್ಯಾಣೋತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಿ ಕಣ್ತುಂಬಿಕೊಂಡರು.
ಸೋಮವಾರ ಬೆಳಿಗ್ಗೆ ಲಕ್ಷ್ಮಿನರಸಿಂಹ ಸ್ವಾಮಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆ, ಹೋಮ, ಪೂರ್ಣಾಹುತಿ ನಂತರ ಲಕ್ಷ್ಮಿನರಸಿಂಹಸ್ವಾಮಿ ಉತ್ಸವ ಮೂರ್ತಿಗಳನ್ನು ಪ್ರಾಕಾರೋತ್ಸವ ಮೂಲಕ ಛತ್ರ, ಚಾಮರ, ವಾದ್ಯ ಗೋಷ್ಠಿಯೊಂದಿಗೆ ಬಗೆ ಬಗೆ ಹೂವುಗಳಿಂದ ಅಲಂಕರಿಸಲಾಗಿತ್ತು.
ಗ್ರೇಡ್ 2 ತಹಶೀಲ್ದಾರ್ ಎನ್.ಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣ ಅಧಿಕಾರಿ ಜಾನಕಿರಾಂ, ಕಂದಾಯ ನಿರೀಕ್ಷಕ ರಾಜಗೋಪಾಲ್ ರಥೋತ್ಸವಕ್ಕೆ ಚಾಲನೆ ನೀಡಿದರು.
ಪಾನಕ, ಹೆಸರು ಬೇಳೆ, ಮಜ್ಜಿಗೆ, ಪ್ರಸಾದ ವಿತರಣೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.