ಪಾವಗಡ: 40 ಮಂದಿ ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ ಐಜೂರು ಪೊಲೀಸ್ ಠಾಣೆಯ ಸಬ್ಇನ್ಪೆಕ್ಟರ್ ಅವರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಮಂಗಳವಾರ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಪಟ್ಟಣದಲ್ಲಿ ಶಾಂತಿಯುತ ಪ್ರತಿಭಟನ ಮೆರವಣಿಗೆ ನಡೆಸಿದರು.
ಪಟ್ಟಣದ ನ್ಯಾಯಾಲಯದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನ ಮೆರವಣಿಗೆ ನಡೆಸಿದರು. ಸುಳ್ಳು ಪ್ರಕರಣ ದಾಖಲಿಸಿರುವ ಸಬ್ ಇನ್ಸ್ಪೆಕ್ಟರ್ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ವಕೀಲರ ಸಂಘದ ಅಧ್ಯಕ್ಷ ಶೇಷಾನಂದನ್ ಮಾತನಾಡಿ, ಜ್ಞಾನವ್ಯಾಪಿ ದೇವಾಲಯದ ವಿಚಾರದಲ್ಲಿ ಲಕ್ನೋ ಜಿಲ್ಲಾ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ನಿಂದಿಸಿದ ಕಾರಣಕ್ಕೆ ವಕೀಲ ಚಾಂದುಪಾಷ ಅವರನ್ನು ವಕೀಲರ ಸಂಘದಿಂದ ಅಮಾನತು ಮಾಡಲಾಗಿದೆ. ಐಜೂರು ಪಿಎಸ್ಐ ತನಿಖೆ ನಡೆಸದೆ ಸುಳ್ಳು ಪ್ರಕರಣ ದಾಖಲಿಸಿ ವಕೀಲರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದರು.
ಕಾರ್ಯದರ್ಶಿ ಎಚ್.ಎ. ಪ್ರಭಾಕರ್, ಪಿಎಸ್ಐ ಅವರನ್ನು ಅಮಾನತು ಮಾಡಿ ಕೆಲಸದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ವಕೀಲ ಎಸ್.ಎನ್. ಮುರಳೀಧರ್, ವಕೀಲರ ಮೇಲೆ ಇಂತಹ ದೌರ್ಜನ್ಯಗಳು ನಡೆಯುತ್ತಲೇ ಇವೆ. ಸರ್ಕಾರ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ವಕೀಲರ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿದಲ್ಲಿ ಜನರ ಪಾಡೇನು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಹನುಮಂತರಾಯುಡು, ವಕೀಲ ಎಎಸ್ ರಘುನಂದನ್, ಚಿನ್ನಕೃಷ್ಣ ರೆಡ್ಡಿ, ಎಸ್. ಶ್ರೀನಿವಾಸ ರೆಡ್ಡಿ, ಹನುಮಂತರಾಯಪ್ಪ, ನಾಗೇಶ್, ಮಲ್ಲಿಕಾರ್ಜುನ್, ನಾಗೇಂದ್ರ ರೆಡ್ಡಿ, ನರಸಿಂಹಪ್ಪ, ರವೀಂದ್ರ, ಜಿ.ಸಿ. ಮಂಜುನಾಥ್, ಮಲ್ಲೇಶ್, ಅಂಬರೀಶ್, ಪಿ ಆರ್ ಮಂಜುನಾಥ್, ತಿರುಮಲೇಶ್, ಅಯಿಷಾ ಭಾನು, ದಿವ್ಯ, ಗೌಸಿಯಾ, ಅಶ್ವಿನಿ, ರಾಜಣ್ಣ, ರಮೇಶ್, ವೆಂಕಟಸ್ವಾಮಿ, ಪಾಂಡುರಂಗಪ್ಪ, ಮಾರುತಿ, ವಾಸುದೇವಮೂರ್ತಿ, ಸಂಜೀವರಾಯಪ್ಪ, ಪೆದ್ದಣ್ಣ, ಚರಣ್ ಶಾನುಭೋಗ್, ಕವಿತ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.