ತುಮಕೂರು: ತುಮಕೂರು ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಸಿಪಿಐ ಸ್ಪರ್ಧಿಸಲಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಇಲ್ಲಿ ಸೋಮವಾರ ತಿಳಿಸಿದರು.
ರಾಜ್ಯದ ಮುಖಂಡರ ಅಭಿಪ್ರಾಯ ಆಲಿಸಿ, ರಾಜ್ಯದಲ್ಲಿ ಸ್ಪರ್ಧೆ ಮಾಡಬಹುದಾದ 2 ಕ್ಷೇತ್ರಗಳನ್ನು ಗುರುತಿಸಿ ಕೇಂದ್ರ ಸಮಿತಿಗೆ ವರದಿ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೊಟ್ಟ ಭರವಸೆ ಈಡೇರಿಸದೆ ಭಾವನಾತ್ಮಕವಾಗಿ ಜನರ ದಾರಿ ತಪ್ಪಿಸುತ್ತಿರುವ ಕೇಂದ್ರದ ವಿರುದ್ಧ ಮಾರ್ಚ್ 3ರಿಂದ ಆಂದೋಲನ ಹಮ್ಮಿಕೊಳ್ಳಲಾಗುವುದು. ‘ಬಿಜೆಪಿ ಸೋಲಿಸಿ, ದೇಶ ಉಳಿಸಿ’ ಎಂಬ ಆಂದೋಲನವು ದಾವಣಗೆರೆಯಲ್ಲಿ ಆರಂಭವಾಗಲಿದೆ. ಮೈಸೂರು, ಕಲಬುರಗಿ, ಬಳ್ಳಾರಿ, ಮಂಗಳೂರು, ಹಾವೇರಿಯಲ್ಲಿ ಕಾರ್ಮಿಕರು, ರೈತರ ಸಮಾವೇಶ ನಡೆಯಲಿದೆ ಮಾಹಿತಿ ನೀಡಿದರು.
ಸಿಪಿಐ ರಾಷ್ಟ್ರೀಯ ಮಂಡಳಿ ಕಾರ್ಯದರ್ಶಿ ಪಿ.ವಿ.ಲೋಕೇಶ್, ‘ಚುನಾವಣೆ ಬಾಂಡ್ ಎಂತಹ ಭ್ರಷ್ಟಾಚಾರ ಎಂಬುದನ್ನು ಸುಪ್ರಿಂಕೋರ್ಟ್ನ ಇತ್ತೀಚೆಗಿನ ತೀರ್ಪು ಸ್ಪಷ್ಟಪಡಿಸಿದೆ. ಚುನಾವಣಾ ಆಯೋಗವು ನಿಗದಿತ ಅವಧಿಯೊಳಗೆ ಚುನಾವಣಾ ಬಾಂಡ್ಗಳ ಬಗ್ಗೆ ತನ್ನ ವೆಬ್ಸೈಟ್ನಲ್ಲಿ ಮಾಹಿತಿ ಹಂಚಿಕೊಳ್ಳಬೇಕು. ಇದರಿಂದ ನಿಜವಾದ ಭ್ರಷ್ಟಾಚಾರಿ ಯಾರು, ದೇಶದ ಸಂಪತ್ತು ಯಾರ ಕೈ ಸೇರುತ್ತಿದೆ ಎಂಬುವುದು ಜನರಿಗೆ ತಿಳಿಯಲಿದೆ’ ಎಂದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್, ರಾಜ್ಯ ಸಹ ಕಾರ್ಯದರ್ಶಿ ಬಿ.ಅಮ್ಜದ್, ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯೆ ಎ.ಜೋತಿ, ಖಜಾಂಚಿ ಅಶ್ವತ್ಥನಾರಾಯಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.