ತುಮಕೂರು: ದೇಶದಲ್ಲಿ ಶಿಕ್ಷಣ ಕೇವಲ ಯಾಂತ್ರಿಕ ಪ್ರಕ್ರಿಯೆಯಾಗಿದ್ದು, ವ್ಯಕ್ತಿತ್ವ ನಿರ್ಮಾಣ ಮಾಡುವುದು ಶಿಕ್ಷಣ ಸಂಸ್ಥೆಗಳ ಆದ್ಯತೆಯಾಗಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಎಂ.ಕೃಷ್ಣೇಗೌಡ ವಿಷಾದಿಸಿದರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಬುಧವಾರ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ, ಕೌಶಲಾಭಿವೃದ್ಧಿ ಘಟಕ, ವಿಜ್ಞಾನ ಕಾಲೇಜು ಹಾಗೂ ಸ್ನಾತಕೋತ್ತರ ವಿಭಾಗಗಳಿಂದ ಹಮ್ಮಿಕೊಂಡಿದ್ದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಜ್ಞಾನ ಸಂಪಾದಿಸುವ, ಮನುಷ್ಯನನ್ನು ಪರಿಪೂರ್ಣಗೊಳಿಸುವ ಸಾಧನವಾಗದೆ, ಜ್ಞಾನವನ್ನು ಮಾಹಿತಿಯೊಂದಿಗೆ ವಿಲೀನಗೊಳಿಸುವ, ಕೆಲಸ, ಸಂಬಳ ಗಳಿಸುವ ಪ್ರಕ್ರಿಯೆಯಾಗಿದೆ. ಕ್ಷುಲ್ಲಕವಾಗಿ, ಬೇಜವಾಬ್ದಾರಿಯಿಂದ ಬದುಕಿ, ಅದರಂತೆ ಸಿದ್ಧಾಂತ, ತತ್ವ ರೂಪಿಸುತ್ತಿರುವುದು ಸಮಾಜದ ದುರಂತ ಎಂದರು.
ಅಧಿಕಾರವೆಂದರೆ ಕೆಲಸ, ಸಂಬಳವಲ್ಲ, ಜ್ಞಾನ. ಜ್ಞಾನದ ಅಳತೆ ನೋಡಿ ಕೆಲಸ ಕೊಡುವ ಕಾಲ ಭವಿಷ್ಯದಲ್ಲಿ ಎದುರಾಗಲಿದೆ. ಬದುಕಿನ ಸ್ಪರ್ಧೆಯಲ್ಲಿ ಜ್ಞಾನದ ಗುಣಮಟ್ಟವನ್ನು ಉತ್ಕೃಷ್ಟಗೊಳಿಸಿಕೊಳ್ಳತ್ತ ಸಾಗಬೇಕು ಎಂದು ಸಲಹೆ ಮಾಡಿದರು.
ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದ, ‘ಶಿಕ್ಷಣ ಸಂಸ್ಥೆಗಳು ನಿರ್ದಿಷ್ಟ ಗುರಿ ಇಲ್ಲದ ವಿದ್ಯಾರ್ಥಿಗಳನ್ನು ರೂಪಿಸುತ್ತಿವೆ. ಜೀವನಕ್ಕಾಗಿ ಏನು ಮಾಡಬೇಕು ಎಂಬುವುದನ್ನು ನಿರ್ಧರಿಸುವ ಕಾಲವಿದು. ಎಲ್ಲರೂ ಮಾನವೀಯ ಮೌಲ್ಯಗಳ ಹಿಂದೆ ಸಾಗಬೇಕು’ ಎಂದು ಹೇಳಿದರು.
ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ವಿಜ್ಞಾನ ಕಾಲೇಜು ಪ್ರಾಂಶುಪಾಲ ಪ್ರೊ.ಪ್ರಕಾಶ್ ಎಂ.ಶೇಟ್, ಕೌಶಲಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ.ಕೆ.ಜಿ.ಪರಶುರಾಮ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.