ADVERTISEMENT

ತುಮಕೂರು | ಗುಳೆ ಬಂದವರ ಗೋಳು ಕೇಳೋರ್‍ಯಾರು?: ಗುಡಿಸಲು ವಾಸಕ್ಕೆ ₹800 ಬಾಡಿಗೆ!

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 6:36 IST
Last Updated 15 ಜೂನ್ 2024, 6:36 IST
ತುಮಕೂರಿನ ಬಡ್ಡಿಹಳ್ಳಿ ಬಳಿಯ ವಲಸೆ ಕಾರ್ಮಿಕರ ಗುಡಿಸಲು
ತುಮಕೂರಿನ ಬಡ್ಡಿಹಳ್ಳಿ ಬಳಿಯ ವಲಸೆ ಕಾರ್ಮಿಕರ ಗುಡಿಸಲು   

ತುಮಕೂರು: ತುತ್ತಿನ ಚೀಲ ತುಂಬಿಸಿಕೊಳ್ಳಲು ಊರು ಬಿಟ್ಟು ವಲಸೆ ಬಂದ ಕಾರ್ಮಿಕರ ಬದುಕಿಗೆ ಭದ್ರತೆ ಇಲ್ಲದಂತಾಗಿದೆ. ಜೀವನವೇ ಅತಂತ್ರವಾಗಿದೆ. ನಗರದಲ್ಲಿ ಖಾಲಿ ಜಾಗಕ್ಕೂ ಬಾಡಿಗೆ ಕೊಡಬೇಕಿದ್ದು, ಕಾರ್ಮಿಕರು ಗುಡಿಸಲು ನಿರ್ಮಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಗುಡಿಸಲಿನಲ್ಲಿ ವಾಸವಿರಲು ಜಾಗದ ಮಾಲೀಕರಿಗೆ ಪ್ರತಿ ತಿಂಗಳು ₹800 ಹಣ ಪಾವತಿಸುತ್ತಿದ್ದಾರೆ. ಮೂರು ಜನ ಮಲಗಲು ಆಗದಂತಹ ಮುರುಕಲು ಗುಡಿಸಲಿನಲ್ಲಿಯೇ ದಿನ ದೂಡುತ್ತಿದ್ದಾರೆ. ನಗರದ ರಿಂಗ್‌ ರಸ್ತೆ, ಶೆಟ್ಟಿಹಳ್ಳಿ, ಬಡ್ಡಿಹಳ್ಳಿ, ಮರಳೂರು ದಿಣ್ಣೆ, ರಾಜೀವ್‌ಗಾಂಧಿ ನಗರ, ಶೇಷಾದ್ರಿಪುರಂ ಕಾಲೇಜು ಮುಂಭಾಗ, ಜಯನಗರ ಒಳಗೊಂಡಂತೆ ವಿವಿಧ ಕಡೆಗಳಲ್ಲಿ ವಲಸೆ ಕಾರ್ಮಿಕರು ನೆಲೆ ಕಂಡುಕೊಂಡಿದ್ದಾರೆ.

ನಗರದ ಹೊರ ವಲಯದ ರಿಂಗ್‌ ರಸ್ತೆ, ಶೆಟ್ಟಿಹಳ್ಳಿ ಕಡೆಗೆ ಒಮ್ಮೆ ಕಣ್ಣಾಡಿಸಿದರೆ ಸಾಲು ಸಾಲು ಗುಡಿಸಲು ಕಾಣಸಿಗುತ್ತವೆ. ದೂರದಿಂದ ನೋಡಿದರೆ ಅಲ್ಲಿನ ನಿವಾಸಿಗಳ ಕಷ್ಟ ಯಾರ ಅರಿವಿಗೂ ಬರುವುದಿಲ್ಲ. ಒಮ್ಮೆ ಮಾತಿಗೆ ಇಳಿದರೆ, ಅಲ್ಲಿನ ಪರಿಸ್ಥಿತಿ ಅವಲೋಕಿಸಿದರೆ ಅವರ ಜೀವನ ಯಾರಿಗೂ ಬೇಡ ಎನ್ನಿಸುತ್ತದೆ.

ADVERTISEMENT

ವಿದ್ಯುತ್‌ ಪೂರೈಕೆ ಇಲ್ಲದೆ ಕತ್ತಲಲ್ಲಿ ಕಾಲ ಕಳೆಯುವ ಜನ, ಸ್ವಚ್ಛತೆ ಮರೀಚಿಕೆಯಾದ ಜಾಗ. ಶುದ್ಧ ಕುಡಿಯುವ ನೀರಿನ ಸರಬರಾಜು ಇಲ್ಲ. ಸ್ನಾನಕ್ಕೂ ನೀರಿನ ಕೊರತೆ. ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಕಾರ್ಮಿಕರು ಬದುಕು ಸಾಗಿಸುತ್ತಿದ್ದಾರೆ. ಶಾಲೆಯಲ್ಲಿ ತಮ್ಮ ವಯಸ್ಸಿನವರ ಜತೆ ಆಟ ಆಡುತ್ತಾ ಇರಬೇಕಾಗಿದ್ದ ಮಕ್ಕಳು ಸಹ ಪೋಷಕರನ್ನು ಹಿಂಬಾಲಿಸಿಕೊಂಡು ಬಂದಿವೆ. ಅವರ ಆಟ–ಪಾಠ ಎಲ್ಲವೂ ಇಲ್ಲಿಯೇ.

ರಾಯಚೂರು, ಮಾನ್ವಿ, ಸಿಂಧನೂರು, ಯಾದಗಿರಿ, ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳ ನೂರಾರು ಮಂದಿ ನಗರಕ್ಕೆ ಗುಳೆ ಬಂದಿದ್ದಾರೆ. ಕಟ್ಟಡ ನಿರ್ಮಾಣ, ರಾಗಿ ಕಟಾವು, ಅಡಿಕೆ, ತೆಂಗಿನ ತೋಟದಲ್ಲಿ ಕೆಲಸಕ್ಕೆ ಹೋಗುತ್ತಾರೆ. ಕಳೆದ ವರ್ಷದಿಂದ ಜಿಲ್ಲೆಯಲ್ಲಿ ಸರಿಯಾದ ಮಳೆ ಇಲ್ಲದೆ ಕೃಷಿ ಕೆಲಸವೂ ಸಿಗುತ್ತಿಲ್ಲ. ಇದರಿಂದ ಹೆಚ್ಚಿನ ಕಾರ್ಮಿಕರು ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗುತ್ತಿದ್ದಾರೆ.

ಎಷ್ಟೇ ಕೆಲಸ ಮಾಡಿದರೂ ಕಾರ್ಮಿಕರ ಬದುಕು ಮಾತ್ರ ಸುಧಾರಣೆ ಕಂಡಿಲ್ಲ. ಹಲವು ವರ್ಷಗಳಿಂದ ನಗರದ ವಿವಿಧ ಕಡೆಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕುತ್ತಿದ್ದಾರೆ. ಒಂದು ಶಾಶ್ವತ ನೆಲೆ ಕಲ್ಪಿಸಲು ಇದುವರೆಗೆ ಸಾಧ್ಯವಾಗಿಲ್ಲ. ಕನಿಷ್ಠ ಬಾಡಿಗೆಯಿಂದ ವಿನಾಯಿತಿ ನೀಡಲು ಆಗಿಲ್ಲ. ‘ವಲಸೆ ಕಾರ್ಮಿಕರ ವಿಷಯದಲ್ಲಿ ಕಾರ್ಮಿಕ ಇಲಾಖೆಯೂ ಮೂಕವಾಗಿದೆ. ಅವರಿಗೆ ಕನಿಷ್ಠ ಸೌಲಭ್ಯ ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ’ ಎಂಬುವುದು ಕಾರ್ಮಿಕ ಮುಖಂಡರ ಆರೋಪ.

‘ಹದಿನೈದು ವರ್ಷಗಳಿಂದ ಇಲ್ಲಿಯೇ ಇದ್ದೇವೆ. ನಮಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ರಾತ್ರಿಯಾದರೆ ಸೋಲಾರ್‌ ಬೆಳಕಿನಲ್ಲಿ ದಿನ ಕಳೆಯಬೇಕು. ಇದುವರೆಗೆ ಯಾರೊಬ್ಬರೂ ಇಲ್ಲಿಗೆ ಬಂದು ನಮ್ಮ ಕಷ್ಟ ಕೇಳಿಲ್ಲ. ಮಹಾನಗರ ಪಾಲಿಕೆ ನಿದ್ರೆಗೆ ಜಾರಿದೆ’ ಎಂದು ಸಿಂಧನೂರಿನ ವೀರೇಶ್‌ ಬೇಸರಿಸಿದರು.

‘ಮಳೆ ಬಂದಾಗ ಗುಡಿಸಲಿಗೆ ನೀರು ನುಗ್ಗುತ್ತದೆ. ಅಂತಹ ಸಮಯದಲ್ಲಿ ಇಡೀ ರಾತ್ರಿ ನಿದ್ದೆ ಇಲ್ಲದೆ ಕಳೆದಿದ್ದೇವೆ. ಹೆಚ್ಚಿನ ಮಳೆಯಾದಾಗ ಪಾಲಿಕೆ ಅಧಿಕಾರಿಗಳು ಬಂದು ಹೋಗುತ್ತಾರೆ. ಇದಾದ ಬಳಿಕ ಇತ್ತ ಯಾರೂ ಸುಳಿಯುವುದಿಲ್ಲ. ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ’ ಎಂದು ರಾಯಚೂರು ಜಿಲ್ಲೆಯ ಮಾನ್ವಿಯ ನಿವಾಸಿ ಯಲ್ಲಪ್ಪ ತಮ್ಮ ಗುಡಿಸಲಿಗೆ ತಾಡಪಾಲು ಹೊದಿಸುತ್ತ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರಿನ ಬಡ್ಡಿಹಳ್ಳಿ ಬಳಿ ಸೀರೆಯಲ್ಲಿ ತೊಟ್ಟಿಲು ಕಟ್ಟಿ ಮಕ್ಕಳನ್ನು ಮಲಗಿಸಿರುವುದು
ತುಮಕೂರಿನ ಶೆಟ್ಟಿಹಳ್ಳಿ ಕೆರೆಯ ಹತ್ತಿರ ನಿರ್ಮಾಣದ ಹಂತದಲ್ಲಿರುವ ಗುಡಿಸಲು
‘ಊಟಕ್ಕೆ ರೊಕ್ಕಿಲ್ಲ ಓಟು ಹಾಕಾಕ ಎಲ್ಲಿ ಹೋಗೋಣ’
‘ಊಟಕ್ಕೆ ರೊಕ್ಕಿಲ್ಲ ಓಟು ಹಾಕಾಕ ಎಲ್ಲಿಂದ ಹೋಗೋಣ’– ಹೀಗೆ ಪ್ರಶ್ನೆ ಮಾಡಿದ್ದು ವಲಸೆ ಕಾರ್ಮಿಕರಾದ ರಾಯಚೂರಿನ ರತ್ನಮ್ಮ. ನಗರದಲ್ಲಿರುವ ವಲಸೆ ಕಾರ್ಮಿಕರಲ್ಲಿ ಶೇ 80ರಷ್ಟು ಜನ ಈ ಬಾರಿ ಮತದಾನ ಮಾಡಲು ತಮ್ಮೂರಿಗೆ ತೆರಳಿಲ್ಲ. ಇಲ್ಲಿರುವ ಜನರಿಗೆ ಚುನಾವಣೆ ಯಾವಾಗ ಎಂಬುದೇ ತಿಳಿದಿಲ್ಲ. ಅಧಿಕಾರಿಗಳು ಅಬ್ಬರದ ಪ್ರಚಾರ ಮಾಡಿದರೂ ವಲಸೆ ಕಾರ್ಮಿಕರನ್ನು ಮತಗಟ್ಟೆಗೆ ಕರೆ ತರುವ ಕೆಲಸವಾಗಿಲ್ಲ. ನಗರದ ಹೊರ ವಲಯದ ಬಡ್ಡಿಹಳ್ಳಿ ಹತ್ತಿರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿ ಇದೆ. ‘ದೀಪದ ಬುಡದಲ್ಲಿ ಕತ್ತಲು’ ಎಂಬಂತೆ ಈ ಕಚೇರಿಯ ಎದುರುಗಡೆಯೇ ನೂರಾರು ಜನ ವಲಸೆ ಕಾರ್ಮಿಕರು ವಾಸಿಸುತ್ತಿದ್ದರೂ ಅವರಿಗೆ ಮತದಾನದ ಬಗ್ಗೆ ಅರಿವು ಮೂಡಿಸಿಲ್ಲ. ಮತದಾನ ಮಾಡಲು ತಮ್ಮ ಊರುಗಳಿಗೆ ತೆರಳುವಂತೆ ಮನವೊಲಿಸಲು ಯಾರೊಬ್ಬರೂ ಮುಂದಾಗಿಲ್ಲ. ‘ಒಮ್ಮೆ ಊರಿಗೆ ಹೋದ್ರೆ ₹5 ಸಾವಿರ ಬೇಕಾಗುತ್ತೆ ದುಡ್ಡು ಯಾರು ಕೊಡ್ತಾರೆ. ಇಲ್ಲೇ ಇದ್ರೆ ಒಂದು ದಿನದ ಕೂಲಿಯಾದರೂ ಸಿಗುತ್ತೆ’ ಎಂದು ಸುನಂದಮ್ಮ ಪ್ರತಿಕ್ರಿಯಿಸಿದರು.
ಆರಂಭವಾಗದ ಶಿಶು ಪಾಲನಾ ಕೇಂದ್ರ
ಕಟ್ಟಡ ಮತ್ತು ಇತರೆ ನಿರ್ಮಾಣ ಹಾಗೂ ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಜಿಲ್ಲೆಯ ವಿವಿಧೆಡೆ ಆರಂಭಿಸಿದ್ದ 5 ಶಿಶು ಪಾಲನಾ ಕೇಂದ್ರಗಳನ್ನು ಕಳೆದ ವರ್ಷ ಮುಚ್ಚಲಾಯಿತು. ಈ ಕೇಂದ್ರಗಳಲ್ಲಿ ಮಕ್ಕಳ ಕಲಿಕೆ ನಿರಾಂತಕವಾಗಿ ಸಾಗಿತ್ತು. ಪೋಷಕರು ಕೆಲಸಕ್ಕೆ ಹೋದರೆ ಮಕ್ಕಳು ಕೇಂದ್ರಗಳಲ್ಲಿ ದಿನ ಕಳೆಯುತ್ತಿದ್ದರು. ಅನುದಾನದ ಕೊರತೆಯಿಂದ ಮುಚ್ಚಿದ್ದ ಕೇಂದ್ರಗಳನ್ನು ಇದುವರೆಗೆ ಆರಂಭಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.