ತುಮಕೂರು: ಗ್ರಾಮೀಣ ಭಾಗದ ಪ್ರತಿ ಮನೆಯಿಂದ ತಿಂಗಳಿಗೆ ₹20 ಸ್ವಚ್ಛತಾ ಕರ ಸಂಗ್ರಹಿಸಿ, ನೈರ್ಮಲ್ಯ ಕಾಪಾಡಲು ಬಳಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಪಿಡಿಒ, ಕಾರ್ಯದರ್ಶಿ, ವಾಟರ್ಮ್ಯಾನ್ಗಳಿಗೆ ಹಮ್ಮಿಕೊಂಡಿದ್ದ ನೀರು ಪರೀಕ್ಷೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ತಿಂಗಳಿಗೆ 10 ಬಾರಿ ಕುಡಿಯುವ ನೀರಿನ ಮೂಲಗಳ ಪರೀಕ್ಷೆ ನಡೆಸಬೇಕು. ಜಿಲ್ಲೆಯ ಜನರು ಅಶುದ್ಧ ನೀರು ಕುಡಿದು ಜನ ಸಮಸ್ಯೆ ಅನುಭವಿಸಬಾರದು. ನೀರು ಕಲುಷಿತವಾಗದಂತೆ ಕ್ರಮ ವಹಿಸಬೇಕು. ಗ್ರಾಮದ ಓವರ್ ಹೆಡ್ ಟ್ಯಾಂಕ್, ಕುಡಿಯುವ ನೀರಿನ ವಿತರಣೆಯ ವ್ಯವಸ್ಥೆ ಪರಿಶೀಲಿಸಬೇಕು. ಇದರಿಂದ ಗ್ರಾಮೀಣ ಜನರಿಗೆ ಶೇ 100ರಷ್ಟು ಶುದ್ಧ ನೀರನ್ನು ಪೂರೈಸಬಹುದು ಎಂದರು.
ಕಾಲ ಕಾಲಕ್ಕೆ ಚರಂಡಿ, ಓವರ್ ಹೆಡ್ ಟ್ಯಾಂಕ್ ಸ್ವಚ್ಛಗೊಳಿಸಬೇಕು. ಇದುವರೆಗೆ 1,687 ಓವರ್ ಹೆಡ್ ಟ್ಯಾಂಕ್, 26 ಕೆರೆ ಸ್ವಚ್ಛಗೊಳಿಸಲಾಗಿದೆ. 1,400 ಶುದ್ಧ ನೀರಿನ ಘಟಕ ನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರವೀಶ್, ಜಿ.ಪಂ ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ತಾ.ಪಂ ಇಒ ಹರ್ಷಕುಮಾರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.