ಹುಳಿಯಾರು: ಇಂದಿಗೂ ತನ್ನ ರುಚಿಯಿಂದ ಗ್ರಾಹಕರನ್ನು ಸೆಳೆಯುವ ‘ಸಿದ್ದಪ್ಪ ಹೊಟೆಲ್’ ಈ ಭಾಗದ ಜನರಿಗೆ ಚಿರಪರಿಚಿತ.
ಪ್ರತಿ ನಿತ್ಯ ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟಕ್ಕೆ ಸರತಿ ಸಾಲು ಇರುತ್ತದೆ. ಇಡ್ಲಿ, ವಡೆ, ಪೂರಿ, ಚಿತ್ರಾನ್ನ ಬೆಳಿಗ್ಗೆಯ ತಿಂಡಿಗೆ ಸಿದ್ಧವಾಗಿರುತ್ತವೆ. ಸಾಮಾನ್ಯವಾಗಿ ಇಲ್ಲಿಗೆ ಬರುವ ಗ್ರಾಹಕರು ಇಡ್ಲಿ, ಪೂರಿ, ಚಿತ್ರಾನ್ನದ ರುಚಿ ನೋಡಿಕೊಂಡೇ ಹೋಗುತ್ತಾರೆ. ಚಪಾತಿ, ಅನ್ನ–ಸಾಂಬಾರು, ಮಜ್ಜಿಗೆ ಮಧ್ಯಾಹ್ನದ ಮೆನು.
ಪಟ್ಟಣಕ್ಕೆ ಯಾರೇ ಬಂದರೂ ಒಳ್ಳೆಯ ಊಟ, ತಿಂಡಿ ಎಲ್ಲಿ ಸಿಗುತ್ತದೆ ಎಂಬ ಪ್ರಶ್ನೆ ಕೇಳಿದರೆ ಎಲ್ಲರೂ ‘ಹೊಟೆಲ್ ಸಿದ್ದಪ್ಪ’ ಎಂದೇ ಹೇಳುತ್ತಾರೆ. ಬರುವ ಗ್ರಾಹಕರಿಗೆ ಪ್ರೀತಿಯಿಂದ ಹೊಟ್ಟೆ ತುಂಬಾ ಬಡಿಸುವ ಪರಿಪಾಠ ಹಿಂದಿನಿಂದಲೂ ಬಂದಿದೆ. ಹಳೆಯ ಕಟ್ಟಡವಾದರೂ ಪ್ರಸ್ತುತ ನವನವೀನ ಹೋಟೆಲ್ಗಳಿಗೂ ಸಡ್ಡು ಹೊಡೆಯುತ್ತಿದೆ. ಈ ಹೋಟೆಲ್ಗೆ ಮೂರು ತಲೆಮಾರಿನ ಇತಿಹಾಸವಿದೆ.
ಪಟ್ಟಣದಲ್ಲಿ ಮೊದಲು ಆರಂಭವಾದ ಹೋಟೆಲ್ ಎಂದೇ ಜನ ಇದನ್ನು ಗುರುತಿಸುತ್ತಾರೆ. ಸಿದ್ದಪ್ಪ ತಂದೆ ಮಾರಪ್ಪ ಮೊದಲಿಗೆ ಗುಡಿಸಲಿನಲ್ಲಿ ಹೋಟೆಲ್ ಪ್ರಾರಂಭಿಸಿದರು. ನಂತರ 1960ರಲ್ಲಿ ಸಣ್ಣ ಮನೆಯಾಕಾರದ ಭವನ ನಿರ್ಮಿಸಿ ಅದರಲ್ಲಿ ಹೋಟೆಲ್ ಮುಂದುವರಿಸಿದರು. ಈಗ ಸಿದ್ದಪ್ಪ ಪುತ್ರ ಎಚ್.ಎಸ್.ರಾಜಶೇಖರ್ ಹೋಟೆಲ್ ನಡೆಸಿಕೊಂಡು ಹೋಗುತ್ತಿದ್ದಾರೆ. ಪ್ರಾರಂಭದಿಂದ ಇಲ್ಲಿಯ ತನಕ ರುಚಿ, ಶುಚಿಯಿಂದ ಹೋಟೆಲ್ ನಡೆಯುತ್ತಿದ್ದು, ಊಟಕ್ಕೆ ಬರುವ ಮಂದಿ ಸ್ಥಳದ ಅಭಾವದಿಂದ ತಡವಾದರೂ ಕಾದು ಊಟ ಮಾಡಿಕೊಂಡು ಹೋಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.