ತುಮಕೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಭ್ರಷ್ಟಾಚಾರ ತಡೆಗೆ ಆಗ್ರಹಿಸಿ ಸಿಪಿಎಂ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು.
‘ಕೇಂದ್ರ ಸರ್ಕಾರದಿಂದ ತೆರಿಗೆ ಪಾಲು ಪಾವತಿಯಾಗುತ್ತಿಲ್ಲ. ಬರ ಪರಿಹಾರ, ತೆರಿಗೆ ಹಣ ಪಡೆಯಲು ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ದೊಡ್ಡ ಬಂಡವಾಳದಾರರಿಗೆ ನೀಡುವ ಸಹಾಯ ಧನ ಕಡಿತ ಮಾಡಿ, ಶ್ರೀಮಂತರ ಮೇಲೆ ತೆರಿಗೆ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ತಕ್ಷಣಕ್ಕೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು’ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್ ಆಗ್ರಹಿಸಿದರು.
ಅಭಿವೃದ್ಧಿ ನಿಗಮದ ಸೌಲಭ್ಯಕ್ಕೆ ಫಲಾನುಭವಿಗಳ ಆಯ್ಕೆ, ವರ್ಗಾವಣೆ, ಬಡ್ತಿ, ಗುತ್ತಿಗೆ ಕಾಮಗಾರಿ ಸೇರಿ ಹಲವು ಕಡೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ‘ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್, ಹಾಲಿನ ದರ ಏರಿಕೆ ನಿರ್ಧಾರ ಹಿಂಪಡೆಯಬೇಕು. ಬಸ್ ಪ್ರಯಾಣ, ಕುಡಿಯುವ ನೀರು, ಕಸ ವಿಲೇವಾರಿ ದರ ಏರಿಕೆಗಳ ಪ್ರಸ್ತಾಪ, ಸಾರ್ವಜನಿಕ ಆಸ್ತಿಗಳ ಮಾರಾಟ ಕೈ ಬಿಡಬೇಕು. ಅಕಾಡೆಮಿ, ಪ್ರಾಧಿಕಾರಗಳ ಸ್ವಾಯತ್ತತೆ ಬಲಪಡಿಸಬೇಕು' ಎಂದು ಆಗ್ರಹಿಸಿದರು.
ಸಿಪಿಎಂ ಮುಖಂಡರಾದ ಖಲೀಲ್, ಸುಜಿತ್ ನಾಯಕ್, ರಂಗಧಾಮಯ್ಯ, ಮುತ್ತುರಾಜು, ಶಶಿಕುಮಾರ, ಲಕ್ಷ್ಮಿದೇವಮ್ಮ, ಜವಾಹರ, ರಫಿಕ್ ಪಾಷ, ರಾಮಕೃಷ್ಣ, ಲಕ್ಷ್ಮಿಕಾಂತ್, ಮಾರುತಿ ಪ್ರಸನ್ನ, ಇಂತಿಯಾಜ್ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.