ತುಮಕೂರು: ಜಿಲ್ಲೆಯ ಎಲ್ಲೆಡೆ ಮೇವಿನ ಅಭಾವ ಉಂಟಾಗಿದ್ದು, ಜಾನುವಾರುಗಳಿಗೆ ಉಚಿತವಾಗಿ ಮೇವು ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್ಎಸ್) ಪದಾಧಿಕಾರಿಗಳು, ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.
ಬರದಿಂದ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ದುಬಾರಿ ಹಣ ನೀಡಿದರೂ ಮೇವು ಲಭ್ಯವಿಲ್ಲ ಎನ್ನುತ್ತಿದ್ದಾರೆ. ಕಳೆದ ಫೆ. 19ರಂದು ಮೇವು ಪೂರೈಸುವಂತೆ ಬೆಳ್ಳಾವಿ ಗ್ರಾಮ ಪಂಚಾಯಿತಿ ಮೂಲಕ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ರಾಸುಗಳಿಗೆ ಮೇವು ಸಿಕ್ಕಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಮೇವಿಗೆ ಬರವಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಮೇವಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಮೇವಿದ್ದರೆ ಎಲ್ಲಿದೆ ಎಂಬುದನ್ನು ತೋರಿಸಲಿ ಎಂದು ಸವಾಲು ಹಾಕಿದರು.
‘ಮೇವಿಲ್ಲದೆ ದನಗಳಿಗೆ ಅಡಿಕೆ ಪಟ್ಟೆ ಸಿಗಿದು ಹಾಕಿ ಪೋಷಣೆ ಮಾಡುತ್ತಿದ್ದೇವೆ. ಜಿಲ್ಲಾ ಆಡಳಿತ ಮೇವು ಸರಬರಾಜಿಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ’ ಎಂದು ಬೆಳ್ಳಾವಿಯ ರೈತ ಮುಖಂಡ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಆರ್ಎಸ್ ಉಪಾಧ್ಯಕ್ಷ ಬಿ.ಉಮೇಶ್, ಕಾರ್ಯದರ್ಶಿ ಬಸವರಾಜು, ಸಿಪಿಎಂ ರಾಜ್ಯ ಕಾರ್ಯದರ್ಶಿ ಸೈಯದ್ ಮುಜೀಬ್, ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಮುಖಂಡರಾದ ಸಿ.ಅಜ್ಜಪ್ಪ, ಗೌರಮ್ಮ, ಪವಿತ್ರಾ, ದೇವರಾಜು, ಜಯಮ್ಮ, ಗುರುಸಿದ್ದಯ್ಯ, ಅಂಜಿನಪ್ಪ, ರಾಜೇಶ್, ಲಕ್ಷ್ಮಯ್ಯ, ನಾಗರಾಜು ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.