ತಿಪಟೂರು: ಮೈಕ್ರೋ ಫೈನಾನ್ಸ್ ಕಂಪನಿಗಳು ನಡೆಸುತ್ತಿರುವ ದೌರ್ಜನ್ಯ, ದಬ್ಬಾಳಿಕೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಪ್ರಾಂತ ರೈತಸಂಘ, ರಾಜ್ಯ ರೈತ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ, ಅಲ್ಪ ಸಂಖ್ಯಾತ ಸಂಘಟನೆ, ಅಲೆಮಾರಿ ಹಾಗೂ ಬುಡಕಟ್ಟು ಸಂಘಟನೆ ಸೋಮವಾರ ಕೆಂಪಮ್ಮ ದೇವಿ ದೇವಸ್ಥಾನದ ಆವರಣದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಮಾತನಾಡಿ, ನಾಡಿನ ಉದ್ದಗಲಕ್ಕೂ ದಲಿತರ ಮತ್ತು ಜನಸಾಮಾನ್ಯರ ಮೇಲೆ ಮೈಕ್ರೋಫೈನಾನ್ಸ್ನವರು ಗೂಂಡಾಗಳನ್ನು ಮುಂದೆ ಇಟ್ಟುಕೊಂಡು ಪುಂಡಾಟಿಕೆ ನಡೆಸಿ ಸಾಲ ಪಡೆದವರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಇಂತಹ ಮೈಕ್ರೋಫೈನಾನ್ಸ್ನವರ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದರು.
ದೌರ್ಜನ್ಯ ಹಾಗೂ ದಬ್ಬಾಳಕೆ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಪರವಾನಗಿ ರದ್ದು ಮಾಡಬೇಕು. ದೌರ್ಜನ್ಯ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ₹25 ಲಕ್ಷ ಪರಿಹಾರ ನೀಡಬೇಕು. ಮೈಕ್ರೋ ಫೈನಾನ್ಸ್ ಸಾಲ ಮನ್ನಾ ಮಾಡಬೇಕು. ಮೈಕ್ರೋ ಫೈನಾನ್ಸ್ ಮಾಲೀಕರ ಮತ್ತು ಪುಂಡರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಪ್ರಾಂತ ರೈತ ಸಂಘದ ಚನ್ನಬಸವಣ್ಣ, ರಾಜ್ಯ ರೈತ ಸಂಘಟನೆಯ ದೇವರಾಜು ತಿಮ್ಲಾಪುರ, ಕರ್ನಾಟಕ ರಕ್ಷಣಾ ವೇದಿಕೆ ವಿಜಯ್ಕುಮಾರ್, ಅಲ್ಪ ಸಂಖ್ಯಾತ ಸಂಘಟನೆಯ ಇಮ್ರಾನ್, ಅಲೆಮಾರಿ ಸಂಘಟನೆಯ ಇಂದ್ರಮ್ಮ ಹಾಗೂ ಬುಡಕಟ್ಟು ಸಂಘಟನೆಯ ಉಜ್ಜಜ್ಜಿ ರಾಜಣ್ಣ, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಜಕ್ಕನಹಳ್ಳಿ ಮೋಹನ್, ಮಹಿಳಾ ಘಟಕದ ಸಂಚಾಲಕಿ ಮಂಜುಳಾ, ನಂದಿನಿ, ಸುರೇಶ್, ಅಣ್ಣಪ್ಪ, ರಮೇಶ್ ಎಸ್.ಸಿ ಶಿವಪುರ, ಕೀರ್ತಿ ಹತ್ಯಾಳು, ರಘು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.