ತುಮಕೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಏಕಗವಾಕ್ಷಿ ಯೋಜನೆಯಡಿ ಚುಟುಕು ಸಾಹಿತ್ಯ ಕೃತಿಗಳನ್ನು ಆಯ್ಕೆ ಮಾಡದಿರುವುದಕ್ಕೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಕಾಶ್ ಕೆ.ನಾಡಿಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2021ನೇ ಸಾಲಿನಲ್ಲಿ ವಿವಿಧ ಪ್ರಕಾರದ ಸುಮಾರು 3 ಸಾವಿರ ಕೃತಿಗಳು ಆಯ್ಕೆಯಾಗಿವೆ. ಇದರಲ್ಲಿ ಚುಟುಕು ಸಾಹಿತ್ಯದ ಕೃತಿಗಳಿಲ್ಲ. ನಾಲ್ಕೇ ಸಾಲುಗಳಲ್ಲಿ ಅರ್ಥಗರ್ಭಿತವಾದ ಚುಟುಕು ರಚಿಸಿ, ಸಮಾಜದಲ್ಲಿ ಜಾಗೃತಿ ಮೂಡಿಸುತ್ತದೆ. ಇಂತಹ ಸಾಹಿತ್ಯಕ್ಕೆ ಏಕೆ ಪ್ರಾಮುಖ್ಯತೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಚುಟುಕು ಕವನ ರಚಿಸುವ ಸಾವಿರಾರು ಸಾಹಿತಿಗಳಿದ್ದಾರೆ. ತನ್ನದೇ ಆದ ಇತಿಹಾಸ ಇರುವ ಚುಟುಕು ಸಾಹಿತ್ಯ ಕೈಬಿಟ್ಟು ಗಜಲ್ ಕೃತಿ ಆಯ್ಕೆ ಮಾಡಲಾಗಿದೆ. ಚುಟುಕು ಸಾಹಿತ್ಯದ ಕುರಿತು ಜ್ಞಾನ ಇಲ್ಲದೆ ಅಥವಾ ಅಚಾತುರ್ಯದಿಂದ ಇದು ಸಂಭವಿಸಿದೆಯೇ ಎಂಬುವುದನ್ನು ಆಯ್ಕೆ ಸಮಿತಿ ಸ್ಪಷ್ಟಪಡಿಸಬೇಕು. ಗ್ರಂಥಾಲಯ ಇಲಾಖೆ ಪುಸ್ತಕ ಆಯ್ಕೆಯನ್ನು ಮರು ಪರಿಶೀಲಿಸಿ, ಎಲ್ಲ ಸಾಹಿತ್ಯ ಪ್ರಕಾರಗಳಿಗೂ ಸಮಾನ ಗೌರವ ಕೊಡಬೇಕು. ಆಯ್ಕೆ ಮಾಡಲು ಆಗದಿದ್ದರೆ ಸೂಕ್ತ ಕಾರಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.