ತುಮಕೂರು: ‘ಪ್ರಕ್ಷುಬ್ಧ ಬದುಕಿಗೆ ಪ್ರೀತಿಯೂ, ಸಂಕಟಗಳ ಬಿಡುಗಡೆಗೆ ಸಾಹಿತ್ಯವೂ ಅನಿವಾರ್ಯ’ ಎಂದು ಲೇಖಕಿ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟರು.
ನಗರದಲ್ಲಿ ಭಾನುವಾರ ದಾರಿ ಬುತ್ತಿ ಪ್ರಕಾಶನದಿಂದ ಹಮ್ಮಿಕೊಂಡಿದ್ದ ಕೆ.ಬಿ.ಲಕ್ಷ್ಮಿ ಅವರ ‘ಒಲವ ಹಾಡು’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ದಾರಿ ಬುತ್ತಿ ಬಳಗ ಸಿದ್ಧ ಮಾದರಿ ಮೀರುವ ಹಾದಿಯಲ್ಲಿ ತನ್ನದೇ ಹೆಜ್ಜೆಗಳನ್ನು ಇಡುತ್ತಿದೆ. ಪ್ರೀತಿ ಹಂಚುವ ಜೊತೆಗೆ ನೇಪಥ್ಯದಲ್ಲಿ ಇರಬಹುದಾದ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದೆ. ಸಾಹಿತ್ಯದ ಓದು, ಗ್ರಹಿಕೆ ಮತ್ತು ಅಳವಡಿಕೆ ಮೂಲಕ ನಮ್ಮ ಬದಲಾವಣೆಯಾದರೆ ನಂತರ ಸಮಾಜ ಪರಿವರ್ತನೆಯಾಗುತ್ತದೆ ಎಂದರು.
ಲೇಖಕಿ ಆಶಾರಾಣಿ ಬಗ್ಗನಡು, ‘ಒಲವ ಹಾಡು’ ಕವನ ಸಂಕಲನದಲ್ಲಿನ ಕವಿತೆಗಳು ಒಲುಮೆಯ ಮಹತ್ವವನ್ನು ಕಾಣಿಸುತ್ತವೆ. ಪರಸ್ಪರ ಅಪನಂಬಿಕೆ, ಅನುಮಾನಗಳು ಆಳುತ್ತಿರುವ ಈ ಹೊತ್ತಿನಲ್ಲಿ ಒಲವು ಸಿನಿಮೀಯವಾಗದೆ, ಸೋಗಾಗದೆ ನಮ್ಮ ಜೀವನೋತ್ಸಾಹ ಹೆಚ್ಚಿಸುವ ಅಗತ್ಯವಿದೆ. ಈ ಕೃತಿಯ ಅಷ್ಟೂ ಕವಿತೆಗಳು ಒಲವನ್ನೇ ಹಾಡಾಗಿಸಿ ಓದುಗರನ್ನು ಮುದಗೊಳಿಸುತ್ತವೆ’ ಎಂದು ತಿಳಿಸಿದರು.
ಲೇಖಕಿ ಜಿ.ಸುಧಾ, ‘ಜಗತ್ತು ರೊಟ್ಟಿಗೂ ಹಸಿದಿದೆ, ಪ್ರೀತಿಗೂ ಹಸಿದಿದೆ. ಹಸಿವನ್ನು ಅರ್ಥೈಸಿಕೊಂಡು ಪ್ರೀತಿಯ ಬುತ್ತಿ ಹಂಚುವುದು ನಮ್ಮ ಕರ್ತವ್ಯವೂ ಆಗಬೇಕಿದೆ’ ಎಂದು ಹೇಳಿದರು.
ಕವಯತ್ರಿ ಕೆ.ಬಿ.ಲಕ್ಷ್ಮಿ, ಲೇಖಕ ಚಂದ್ರಪ್ರಭ ಕಠಾರಿ, ಲೇಖಕಿ ರಂಗಮ್ಮ ಹೊದೆಕಲ್, ದಾರಿ ಬುತ್ತಿ ಬಳಗದ ರಂಜಿತ್, ಕೃಷ್ಣ, ನಾರಾಯಣಗೌಡ, ರಜನಿ, ಭಾಗ್ಯ, ಗಿರಿಜಾರಾವ್, ಪುಟ್ಟನರಸಯ್ಯ, ಲಿಂಗಯ್ಯ, ಗಂಗಲಕ್ಷ್ಮಿ, ಕೆ.ಬಸವರಾಜು, ಎಂ.ಎಚ್.ದೇವರಾಜಮ್ಮ, ಶೈಲಜಾ, ಲೋಕೇಶ್, ಮನ್ವಿತ್, ಬಿ.ಸಿ.ಪ್ರವೇಣಿ, ಆನಂದ್, ದಾದಾಪೀರ್, ತಿಲಕ್, ಎಂ.ಎನ್.ತರಂಗಿಣಿ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.