ತುಮಕೂರು: ಹೊಸದಾಗಿ ಜಾರಿಗೆ ತಂದಿರುವ ಮೂರು ಅಪರಾಧ ಕಾನೂನು ವಿರೋಧಿಸಿ, ನೀಟ್ ಹಗರಣದ ನೈತಿಕ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸಿಪಿಎಂ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
‘ಹೊಸ ಕಾನೂನು ಪ್ರಜಾಪ್ರಭುತ್ವ ಹಾಗೂ ಜನ ವಿರೋಧಿಯಾಗಿದ್ದು, ಕೂಡಲೇ ವಾಪಸ್ ಪಡೆಯಬೇಕು. ಚರ್ಚೆ ಇಲ್ಲದೆ ನಿರಂಕುಶವಾಗಿ ಮತ್ತು ಸಾಕಷ್ಟು ಸಂಖ್ಯೆಯ ಸಂಸದರನ್ನು ಅಮಾನತುಗೊಳಿಸಿ ತರಾತುರಿಯಲ್ಲಿ ಅನುಷ್ಠಾನಕ್ಕೆ ತರಲಾಗಿದೆ’ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್ ದೂರಿದರು.
‘ದೇಶದ್ರೋಹ’ವನ್ನು ನಿರೂಪಿಸುತ್ತಿದ್ದ ಐಪಿಸಿ ಸೆಕ್ಷನ್ 124ಎ ಅನ್ನು ಸುಪ್ರೀಂಕೋರ್ಟ್ ತೆಗೆದುಹಾಕಿದ್ದರೆ, ಹೊಸದಾಗಿ ರೂಪಿಸಿದ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 152 ಮೂಲಕ ಮತ್ತೆ ತರಲಾಗಿದೆ. ಇದು ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ ಎಂದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ‘ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ನಡೆಸಿದ ಪರೀಕ್ಷೆಗಳಲ್ಲಿನ ಅಕ್ರಮದಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಇದರ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ಕೂಡಲೇ ರಾಜೀನಾಮೆ ಸಲ್ಲಿಸಬೇಕು’ ಎಂದು ಒತ್ತಾಯಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಉಮೇಶ್, ನಗರ ಸಮಿತಿ ಸದಸ್ಯ ರಾಘವೇಂದ್ರ, ಮುಖಂಡರಾದ ಟಿ.ಜಿ.ಶಿವಲಿಂಗಯ್ಯ, ಸುಜೀತ್ನಾಯಕ್, ಶಂಕರಪ್ಪ, ಆರ್.ಎಸ್.ಚನ್ನಬಸಣ್ಣ, ಟಿ.ಆರ್.ಕಲ್ಪನಾ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.