ಶಿರಾ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದಿಂದ ಶನಿವಾರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕಳೆದ ವರ್ಷ ಮುಂಗಾರು ವಿಫಲವಾಗಿ, ತೀವ್ರ ಬರದಿಂದಾಗಿ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಕೇವಲ ನೈಜ ಫಹಣಿದಾರರಿಗೆ ಅಲ್ಪ ಸ್ವಲ್ಪ ಪರಿಹಾರ ವಿತರಿಸಿದ್ದು. ಜಂಟಿ ಫಹಣಿ ಖಾತೆ ಬದಲಾವಣೆ ಆಗದೆ ಇರುವ ಶೇ 30ರಷ್ಟು ರೈತರಿಗೆ ಪರಿಹಾರ ದೊರೆತಿಲ್ಲ. ಎಕರೆಗೆ ಕನಿಷ್ಠ ₹10 ಸಾವಿರ ಪರಿಹಾರ ನೀಡಬೇಕು. 2023-24ನೇ ಸಾಲಿನಲ್ಲಿ ಫಸಲ್ ಭೀಮ ಯೋಜನೆಯ ವಿಮಾ ಹಣವನ್ನು ತಕ್ಷಣ ರೈತರ ಖಾತೆಗಳಿಗೆ ಜಮಾ ಮಾಡಿಸಬೇಕು ಎಂದರು.
ಬಗರ್ ಹುಕುಂ ಸಮಿತಿಯಲ್ಲಿ ಜಮೀನು ಇಲ್ಲದ ನೈಜ ಪಲಾನುಭವಿಗಳಿಗೆ ತಕ್ಷಣ ಸಾಗುವಳಿ ಪತ್ರ ವಿತರಿಸಬೇಕು. ಅಕ್ರಮ– ಸಕ್ರಮ ಯೋಜನೆಯಡಿ ರೈತರು ಟಿ.ಸಿಗಾಗಿ ₹30 ಸಾವಿರ ತುಂಬಿ 15 ವರ್ಷ ಕಳೆದರೂ ಟಿ.ಸಿ ನೀಡಿಲ್ಲ. ಕೂಡಲೇ ಕ್ರಮ ವಹಿಸಿ ಹಣ ತುಂಬಿರುವ ಎಲ್ಲ ರೈತರಿಗೆ ಕಂಬ, ತಂತಿ ಮತ್ತು ಟಿ.ಸಿ ಅಳವಡಿಸುವುದು ಸೇರಿದಂತೆ ರೈತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ, ಖಜಾಂಚಿ ಮುಕುಂದಪ್ಪ, ಜಯಣ್ಣ, ರಾಮಣ್ಣ, ಪರುಸಪ್ಪ, ಎಸ್.ಜಗದೀಶ್, ಎಸ್.ರಾಮಣ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.