ತುಮಕೂರು: ಕ್ಯಾನ್ಸರ್ ಲಕ್ಷಣಗಳು ಕಂಡು ಬಂದ ತಕ್ಷಣ ಚಿಕಿತ್ಸೆ ಪಡೆದರೆ ರೋಗ ವಾಸಿ ಮಾಡಬಹುದು. ಯಾರೂ ಭಯ ಪಡುವ ಅಗತ್ಯ ಇಲ್ಲ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ.ರಂಗಸ್ವಾಮಿ ಹೇಳಿದರು.
ನಗರದಲ್ಲಿ ಶನಿವಾರ ಭಾರತೀಯ ವೈದ್ಯಕೀಯ ಸಂಘ ಹಾಗೂ ಸರ್ಜಿಕಲ್ ಸೊಸೈಟಿ, ಆಸ್ಟರ್ ಸಿಎಂಐ ಆಸ್ಪತ್ರೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಆರೈಕೆಯ ಅಂತರ ಮುಚ್ಚಿ’ ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ಕ್ಯಾನ್ಸರ್ ದಿನ ಆಚರಿಸಲಾಗುತ್ತಿದೆ. ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮಲ್ಲಿ ಕ್ಯಾನ್ಸರ್ ಪತ್ತೆ ವಿಳಂಬದಿಂದ ಅಪಾಯ ಸಂಭವಿಸುತ್ತಿದೆ. ನಿಗದಿತ ಸಮಯದಲ್ಲಿ ಕ್ಯಾನ್ಸರ್ ತಪಾಸಣೆ ಮಾಡಿಸಿ ಕೊಂಡರೆ ಈ ಕಾಯಿಲೆಯಿಂದ ಮುಕ್ತರಾಗಬಹುದು’ ಎಂದು ತಿಳಿಸಿದರು.
ವೈದ್ಯೆ ಎನ್.ಸುನೀತಾ, ‘ಮಹಿಳೆಯರಲ್ಲಿ ಕಂಡು ಬರುವ ಕ್ಯಾನ್ಸರ್ನಲ್ಲಿ ಶೇ 26ರಷ್ಟು ಸ್ತನ ಕ್ಯಾನ್ಸರ್ ಇರುತ್ತದೆ. ಅರಿವಿನ ಕೊರತೆ, ತಪಾಸಣೆಯ ಹಿಂಜರಿಕೆಯಿಂದ ಕ್ಯಾನ್ಸರ್ ಪ್ರಕರಣ ಹೆಚ್ಚಾಗುತ್ತಿವೆ’ ಎಂದರು.
ಐಎಂಎ ಕಾರ್ಯದರ್ಶಿ ಡಾ.ಜಿ.ಮಹೇಶ್, ‘ಅಸೋಸಿಯೇಶನ್ ಆಫ್ ಸರ್ಜನ್ ಇಂಡಿಯಾ’ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪ್ರಶಾಂತ್ ಬಿ.ನಿರ್ವಾಣಿರಾವ್, ಕಾರ್ಯದರ್ಶಿ ಡಾ.ಚೇತನ್, ಸರ್ಜಿಕಲ್ ಆಂಕಾಲಜಿ ಸಲಹೆಗಾರರಾದ ಡಾ.ಜಿ.ಗಿರೀಶ್, ಡಾ.ದರ್ಶನ್ ಪಾಟೀಲ್, ಡಾ.ಸಿ.ಎಚ್.ಪುಷ್ಪಾನಾಗ್, ಡಾ.ಮಂಜುನಾಥ್, ಡಾ.ಅನಿತಾ ಬಿ.ಗೌಡ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.