ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ₹3 ಕೋಟಿ ಲಾಭ ಗಳಿಸಬಹುದು ಎಂದು ನಂಬಿಸಿ ಉದ್ಯಮಿಯೊಬ್ಬರಿಗೆ ₹61.58 ಲಕ್ಷ ವಂಚಿಸಲಾಗಿದೆ.
ತುರುವೇಕೆರೆ ತಾಲ್ಲೂಕಿನ ಅಮ್ಮಸಂದ್ರದ ಎಚ್.ಆರ್.ರೇಣುಕಪ್ರಸಾದ್ ಎಂಬುವರು ಸೈಬರ್ ಆರೋಪಿಗಳ ಬಲೆಗೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಫೇಸ್ಬುಕ್ನಲ್ಲಿ ಷೇರು ಮಾರುಕಟ್ಟೆಗೆ ಸಂಬಂಧಿಸಿದ ವಿಡಿಯೊ ನೋಡಿ ಅಪರಿಚಿತ ವ್ಯಕ್ತಿಗಳ ಜತೆ ವಾಟ್ಸ್ ಆ್ಯಪ್ ಮುಖಾಂತರ ಚಾಟಿಂಗ್ ಮಾಡಿದ್ದಾರೆ. ನಂತರ ಅವರನ್ನು ‘ಎಸ್ಎಂಸಿ ಸ್ಟಾಕ್’ ಎಂಬ ವಾಟ್ಸ್ ಆ್ಯಪ್ ಗ್ರೂಪ್ಗೆ ಸೇರಿಸಿದ್ದಾರೆ.
‘ಎಸ್ಎಂಸಿ ಗ್ಲೋಬಲ್ ಸೆಕ್ಯುರಿಟಿಸ್’ ನಲ್ಲಿ ಬಂಡವಾಳ ಹೂಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ಆಮಿಷ ಒಡ್ಡಿದ್ದಾರೆ. ಶಿವಾಂಗಿ ಅಗರ್ವಾಲ್ ಎಂದು ಪರಿಚಯಿಸಿಕೊಂಡು ‘ಇನ್ಸ್ ಸ್ಯೂಷನಲ್ ಸರ್ಟಿಫಿಕೇಟ್ ಹಾಗೂ ಸೇಬಿ ನೋಂದಣಿ ಸಂಖ್ಯೆ’ ನೀಡಿದ್ದಾರೆ. ರೇಣುಕಪ್ರಸಾದ್ ಮೊದಲ ಬಾರಿಗೆ ಏ.29ರಂದು ₹50 ಸಾವಿರ ಹಣವನ್ನು ಸೈಬರ್ ವಂಚಕರು ತಿಳಿಸಿದ ಖಾತೆಗೆ ವರ್ಗಾಯಿಸಿದ್ದಾರೆ.
ಹೆಚ್ಚು ಹೆಚ್ಚು ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂದು ಪ್ರೇರೇಪಿಸಿದ್ದಾರೆ. ಇದನ್ನು ನಂಬಿ ಮೇ 16ರ ವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹61,58,500 ಹಣ ವರ್ಗಾವಣೆ ಮಾಡಿದ್ದಾರೆ. ಮೋಸ ಹೋಗಿರುವುದು ಗಮನಕ್ಕೆ ಬಂದ ನಂತರ ಸೈಬರ್ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳುವಂತೆ ಸೈಬರ್ ಠಾಣೆಯ ಮೆಟ್ಟಿಲು ಹತ್ತಿದ್ದು, ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.