ADVERTISEMENT

ಜನರ ನಡುವೆಯೇ ಬದುಕಿದ ಶಿರಾ ಶಾಸಕ ಸತ್ಯಪ್ಪ

ಎಚ್.ಸಿ.ಅನಂತರಾಮು
Published 5 ಆಗಸ್ಟ್ 2020, 10:04 IST
Last Updated 5 ಆಗಸ್ಟ್ 2020, 10:04 IST
ಬಿ.ಸತ್ಯನಾರಾಯಣ
ಬಿ.ಸತ್ಯನಾರಾಯಣ   

ಶಿರಾ: ಶಾಸಕ ಬಿ.ಸತ್ಯನಾರಾಯಣ್ ತಾಲ್ಲೂಕಿನಲ್ಲಿ ಅಷ್ಟೇ ಅಲ್ಲ ಜಿಲ್ಲೆಯಲ್ಲಿಯೇ ಅತ್ಯಂತ ಸರಳ ಜನಪ್ರತಿನಿಧಿ ಎನ್ನುವ ಪ್ರಶಂಸೆಗೆ ಪಾತ್ರರಾದವರು. ಎರಡು ಬಾರಿ ಸಚಿವರಾಗಿದ್ದಾಗಲೂ ಅವರು ಅಧಿಕಾರದ ದರ್ಪ ಮೆರೆದವರಲ್ಲ. ಅಂದೂ ಸಹ ಸರಳವಾಗಿಯೇ ಇದ್ದವರು.

ತಾಲ್ಲೂಕಿನ ಭುವನಹಳ್ಳಿ ಗ್ರಾಮದಲ್ಲಿ 1952ರ ಜುಲೈ 20ರಂದು ಬ್ಯಾಟಪ್ಪ ಮತ್ತು ಕಾಮಕ್ಕ ದಂಪತಿ ಪುತ್ರನಾಗಿ ಜನಿಸಿದ ಸತ್ಯನಾರಾಯಣ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಮಧುಗಿರಿ ತಾಲ್ಲೂಕಿನ ದಂಡಿನದಿಬ್ಬ ಗ್ರಾಮದಲ್ಲಿ ಪೂರ್ಣಗೊಳಿಸಿದರು. ಪದವಿ ಪೂರ್ವ ಕಾಲೇಜು ಮುಗಿಸಿದ ನಂತರ ಮಂಡ್ಯ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.

ವಕೀಲರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣ 1977 ರಲ್ಲಿ ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದರು. 1982ರಲ್ಲಿ ತಾಲ್ಲೂಕು ಜನತಾ ಪಕ್ಷದ ಅಧ್ಯಕ್ಷರಾದರು. 1989ರಲ್ಲಿ ಪ್ರಥಮ ಬಾರಿಗೆ ವಿಧಾನ ಸಭೆಗೆ ಸ್ವರ್ಧೆ ಮಾಡಿ ಸೋಲು ಅನುಭವಿಸಿದರು.

ADVERTISEMENT

ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಅಧಿಕಾರ ಪ್ರಾರಂಭಿಸಿದರು. 1994ರಲ್ಲಿ ಶಿರಾ ಕ್ಷೇತ್ರದಿಂದ ಜನತಾ ಪಕ್ಷದ ಶಾಸಕರಾಗಿ ಆಯ್ಕೆಯಾದರು. ನಂತರ 2004 ಮತ್ತು 2018 ರಲ್ಲಿ ಜನತಾದಳದಿಂದ ಆಯ್ಕೆಯಾದರು. 7 ಬಾರಿ ವಿಧಾನಸಭೆ ಚುನಾವಣೆಗೆ ಸ್ವರ್ಧೆ ಮಾಡಿದ್ದು 3 ಬಾರಿ ಗೆಲವು ಸಾಧಿಸಿದರೆ.

ಸತ್ಯನಾರಾಯಣ ಅವರು ಶಾಸಕರಾಗಿ ಆಯ್ಕೆಯಾದ 3 ಬಾರಿ ಸಹ ಅವರ ಪಕ್ಷ ರಾಜ್ಯದಲ್ಲಿ ಅಧಿಕಾರ ನಡೆಸಿರುವುದು ವಿಶೇಷವಾಗಿ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಸತ್ಯನಾರಾಯಣ ಅವರು 1996ರಲ್ಲಿ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ಸಂಪುಟದಲ್ಲಿ ಕಾರ್ಮಿಕ, ಲಾಟರಿ ಹಾಗೂ ಸಣ್ಣ ಉಳಿತಾಯ ಖಾತೆಯ ಸಚಿವರಾದರು. 2004 ರಲ್ಲಿ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಸಂಪುಟದಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಖಾತೆಯ ಸಚಿವರಾಗಿದ್ದರು. 2018 ರಲ್ಲಿ ಶಾಸಕರಾಗಿ ಆಯ್ಕೆಯಾದ ಸಮಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮಾನಸ ಪುತ್ರನಂತೆ ಇದ್ದು ಕೊನೆಯ ಕ್ಷಣದವರೆಗೂ ಅವರಿಗೆ ನಿಷ್ಠರಾಗಿದ್ದರು. ಸಾಹಿತ್ಯದ ಬಗ್ಗೆ ಒಲವು ಹೊಂದಿದ್ದ ಅವರು ತನ್ನ ಅಧಿಕಾರದ ಅವಧಿಯಲ್ಲಿ ಜನಪರ ಕಲೆಗೆ ಪ್ರೋತ್ಸಾಹ ನೀಡಿದರು. ಮೊದಲ ಬಾರಿ ಶಾಸಕರಾಗಿದ್ದ ಸಮಯದಲ್ಲಿ ಗಡಿನಾಡ ಜಾನಪದ ಸಮ್ಮೇಳನ ನಡೆಸಿದರೆ ಎರಡನೇ ಬಾರಿ ಶಾಸಕರಾಗಿದ್ದ ಸಮಯದಲ್ಲಿ ಶಿರಾದಲ್ಲಿ 2 ದಿನಗಳ ರಾಜ್ಯ ಮಟ್ಟದ ಯುವಜನ ಮೇಳ ನಡೆಸುವ ಮೂಲಕ ಗ್ರಾಮೀಣ ಕಲೆಗಳನ್ನು ಪ್ರೋತ್ಸಾಹಿಸಿದರು.

ಶಿರಾ ಪುರಸಭೆಯಲ್ಲಿ ನಗರಸಭೆಯಾಗಿ ಮೇಲ್ಡರ್ಜೆಗೇರಿಸಿದ್ದು, ಸಾರ್ವಜನಿಕ ಆಸ್ಪತ್ರೆ ಕಟ್ಟಡ, ಕೆಎಸ್ಆರ್ ಟಿಸಿ ಡಿಪೊ ನಿರ್ಮಾಣ, ವಿವೇಕಾನಂದ ಕ್ರೀಡಾಂಗಣ, ಬಾಲಕಿಯರ ಪದವಿ ಪೂರ್ವ ಕಾಲೇಜು, ಡಾ.ಬಿ.ಆರ್.ಅಂಬೇಡ್ಕರ್ ಭವನ, ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರ ಇವರ ಅಧಿಕಾರಾವಧಿಯಲ್ಲಿ ನಿರ್ಮಾಣವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.