ತುಮಕೂರು: ನಗರದ ಶಾಂತಿನಗರದಲ್ಲಿ ಸೋಮವಾರ ಬೆಳಗಿನ ಜಾವ ಸರಣಿ ಕಳ್ಳತನವಾಗಿದ್ದು, ಐದು ಮನೆಗಳ ಬಾಗಿಲು ಒಡೆಯಲಾಗಿದೆ. ನಸ್ರುಲ್ಲಾ ಎಂಬುವರ ಮನೆಯಲ್ಲಿದ್ದ 20 ಗ್ರಾಂ ಚಿನ್ನದ ಒಡವೆ, ₹20 ಸಾವಿರ ನಗದು ಕಳವು ಮಾಡಲಾಗಿದೆ.
ಉಳಿದ ನಾಲ್ಕು ಮನೆಗಳಲ್ಲಿ ಯಾವುದೇ ಒಡವೆ, ಹಣ ಕಳ್ಳತನವಾಗಿಲ್ಲ. ನಸ್ರುಲ್ಲಾ ಅವರ ಮನೆಯ ಅಕ್ಕ–ಪಕ್ಕದ ಮನೆಗಳಿಗೆ ನುಗ್ಗಿದ ಕಳ್ಳರು ಎಲ್ಲ ಕಡೆ ಹುಡುಕಾಡಿದ್ದಾರೆ. ಬಟ್ಟೆಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿದ್ದಾರೆ. ಐದು ಮನೆಯರು ಬಾಗಿಲಿಗೆ ಬೀಗ ಹಾಕಿಕೊಂಡು ಮನೆಯ ಮುಂಭಾಗದಲ್ಲೇ ಮಲಗಿದ್ದರು. ಇದನ್ನು ಗಮನಿಸಿದ ಕಳ್ಳರು ಬೀಗ ಒಡೆದು ಮನೆಯೊಳಗೆ ನುಗ್ಗಿದ್ದಾರೆ.
ಬೆಳಿಗ್ಗೆ ಎದ್ದು ನೋಡಿದಾಗ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.