ADVERTISEMENT

ಶಿಳ್ಳೆಕ್ಯಾತ ಕುಟುಂಬಗಳ ಒಕ್ಕಲೆಬ್ಬಿಸುವ ಹುನ್ನಾರ: ಆರೋಪ

ಮಹಿಳೆಯರ ದೂರು

​ಪ್ರಜಾವಾಣಿ ವಾರ್ತೆ
Published 17 ಮೇ 2024, 14:44 IST
Last Updated 17 ಮೇ 2024, 14:44 IST

ಕುಣಿಗಲ್: 40 ವರ್ಷಗಳಿಂದ ತಾಲ್ಲೂಕಿನ ಕೊರಟಿ ಹೊನ್ನಮಾಚನಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿರುವ ಶಿಳ್ಳೆಕ್ಯಾತ ಕುಟುಂಬಗಳನ್ನು ಒಕ್ಕೆಲೆಬ್ಬಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಇಲ್ಲಿನ ಮಹಿಳೆಯರು ಶುಕ್ರವಾರ ತೀವ್ರ ವಿರೋಧ ವ್ಯಕ್ತಪಡಿಸಿದರು.

ಕೊರಟಿ ಹೊನ್ನಮಾಚನಹಳ್ಳಿ ಸಮೀಪ ಶಿಳ್ಳೆಕ್ಯಾತ ಸಮುದಾಯದ 25ಕ್ಕೂ ಹೆಚ್ಚು ಕುಟುಂಬದವರು ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಪುರುಷರು ಬೀದಿ ಬದಿ ವ್ಯಾಪಾರಕ್ಕೆ ತೆರಳಿದ ಸಮಯದಲ್ಲಿ ಬಂದ ಕೆಲವರು ಕಲ್ಲಿನ ಕಂಬ ನೆಟ್ಟು, ಜಾಗ ತೆರವು ಮಾಡಲು ಸೂಚಿಸಿದ್ದಾರೆ ಎಂದು ಮಹಿಳೆಯರು ದೂರಿದರು.

ಶಿಳ್ಳೆಕ್ಯಾತ ಕುಟುಂಬಗಳ ಮಹಿಳೆಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಮಹಿಳೆಯರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿದ ಘಟನೆಯೂ ನಡೆಯಿತು. ನಂತರ ಮಹಿಳೆ ಪೊಲೀಸ್ ಸಹಾಯವಾಣಿ ‘112’ ಕರೆ ಮಾಡಿದ ಮೇರೆಗೆ ಹುಲಿಯೂರುದುರ್ಗ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಭವ್ಯಶ್ರೀ ಅವರಿಗೆ ಗಾಯಗಳಾಗಿವೆ.

ADVERTISEMENT

ಜಗದೀಶ್, ಶಂಕರ, ಗುಂಡಯ್ಯ, ಸಂತೋಷ, ಕೆಂಪ, ಪ್ರಕಾಶ್ ಅವರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಪುರುಷರು ಇಲ್ಲದ ಸಮಯದಲ್ಲಿ ವಿವಾದ ಸೃಷ್ಟಿಸಿ ನೆಮ್ಮದಿಯ ಜೀವನಕ್ಕೆ ಅಡ್ಡಿಯಾಗಿದ್ದಾರೆ ಎಂದು ಸುಮಾ,ಚಿಕ್ಕಮ್ಮ, ಯಲ್ಲಮ್ಮ, ಕುಮಾರ್ ದೂರಿದ್ದಾರೆ.

ಘಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಲೆಮಾರಿ, ಶಿಳ್ಳೆಕ್ಯಾತ ಸಂಘಟನೆ ತಾಲ್ಲೂಕು ಅಧ್ಯಕ್ಷ ಲಕ್ಷ್ಮೀ ನರಸಯ್ಯ, ಜನವರಿಯಲ್ಲೂ ಇಂತಹ ಪ್ರಯತ್ನ ನಡೆದಿದ್ದು, ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ನಿರ್ಲಕ್ಷ್ಯ ದೋರಿದ ಕಾರಣ ಘಟನೆ ಮರುಕಳಿಸಿದೆ. ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.