ADVERTISEMENT

ನಾಫೆಡ್‌ನಲ್ಲಿ ನಿಧಾನಗತಿಯ ಖರೀದಿ: ಆರೋಪ

ತಿಂಗಳಾನುಗಟ್ಟಲೆ ಖರೀದಿಯೇ ನಡೆದರೆ ರೈತರಿಗೆ ಹಣ ಬರುವುದು ಯಾವಾಗ?

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 4:42 IST
Last Updated 7 ಏಪ್ರಿಲ್ 2024, 4:42 IST
ಗುಬ್ಬಿಯಲ್ಲಿ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದ ರೈತ ಸಂಘದ ಪದಾಧಿಕಾರಿಗಳು
ಗುಬ್ಬಿಯಲ್ಲಿ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದ ರೈತ ಸಂಘದ ಪದಾಧಿಕಾರಿಗಳು   

ಗುಬ್ಬಿ: ಪಟ್ಟಣದ ಕೊಬ್ಬರಿ ಖರೀದಿ ಕೇಂದ್ರಕ್ಕೆ ಶನಿವಾರ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ. ಗೋವಿಂದರಾಜು ಹಾಗೂ ಪದಾಧಿಕಾರಿಗಳು  ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಅವರನ್ನು ತರಾಟೆಗೆ ತೆಗೆದುಕೊಂಡರು. ರೈತರ ಸಂಕಷ್ಟವನ್ನು ವಿವರಿಸಿ ಮನವಿ ಪತ್ರ ಸಲ್ಲಿಸಿದರು.

ಎ. ಗೋವಿಂದರಾಜು ಮಾತನಾಡಿ, ‘ಬರಗಾಲದಿಂದ ತತ್ತರಿಸಿರುವ ರೈತರಿಂದ ಏಜೆನ್ಸಿಗಳು ಹಾಗೂ ಅಧಿಕಾರಿಗಳು ತೂಕದಲ್ಲಿ ಮೋಸ ಮತ್ತು ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿರುವುದು ಖಂಡನೀಯ. ಏಜೆನ್ಸಿಯವರು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ಖರೀದಿ ಕೇಂದ್ರದಲ್ಲಿ ನಿತ್ಯ ಕೇವಲ 200 ಕ್ವಿಂಟಲ್ ಕೊಬ್ಬರಿ ಖರೀದಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ತಾಲ್ಲೂಕಿಗೆ ನಿಗದಿಪಡಿಸಿರುವಷ್ಟು ಕೊಬ್ಬರಿ ಖರೀದಿ ಮಾಡಲು ಇನ್ನೂ ಆರು ತಿಂಗಳು ಬೇಕಾಗುತ್ತದೆ. ತಿಂಗಳಾನುಗಟ್ಟಲೆ ಖರೀದಿಯೇ ನಡೆದರೆ ರೈತರಿಗೆ ಹಣ ಬರುವುದು ಯಾವಾಗ? ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಮತ್ತಷ್ಟು ಕಷ್ಟಕ್ಕೆ ಸಿಲುಕುವರು. ಖರೀದಿ ಮಾಡಿದ ತಕ್ಷಣ ರೈತರ ಖಾತೆಗೆ ಹಣ ಹಾಕಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಖರೀದಿ ಕೇಂದ್ರದಲ್ಲಿ ರೈತರಿಗೆ ವಂಚನೆ ನಡೆಯುತ್ತಿದೆ. ಮೂಲ ಸೌಕರ್ಯಗಳನ್ನೂ ಒದಗಿಸಿಲ್ಲ ಎಂದು ರೈತ ಸಿದ್ಧಲಿಂಗಪ್ಪ ಬೇಸರ ವ್ಯಕ್ತಪಡಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಲೋಕೇಶ್, ಪದಾಧಿಕಾರಿಗಳಾದ ಶಿವಕುಮಾರ್, ಯತೀಶ್, ಸತ್ತಿಗಪ್ಪ, ಜಗದೀಶ್ ಮಹಾದೇವಪ್ಪ, ರುದ್ರಯ್ಯ, ರವೀಶ್ ಹಾಗೂ ರೈತ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.