ತುಮಕೂರು: ಪ್ರಸ್ತುತ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದು, ಇದು ಅಪಾಯಕಾರಿ ಬೆಳವಣಿಗೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆರ್.ನಟರಾಜ್ ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕಿನ ದೇವರಾಯನ ದುರ್ಗದಲ್ಲಿ ಭಾನುವಾರ ‘ಪ್ರಗತಿಪರ ರೈತರು ಹಾಗೂ ದೇವರಾಯನ ದುರ್ಗ ಜೀವ-ವೈವಿಧ್ಯತೆಗಳ ಹಿತರಕ್ಷಣಾ ಸಮಿತಿ’ ಉದ್ಘಾಟಿಸಿ ಮಾತನಾಡಿದರು.
ಬಿತ್ತನೆ ಬೀಜ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿದರೆ ರೈತರು ಉಳಿಯಲು ಸಾಧ್ಯ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ವ್ಯವಸಾಯ ರೈತರಿಗೆ ಲಾಭದಾಯಕವಾಗುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದರು.
ರೈತರು ಸಂಕಷ್ಟದಲ್ಲಿದ್ದು, ವ್ಯವಸಾಯ ಲಾಭದಾಯಕವಾಗಿಲ್ಲ. ಅವರ ಸಮಸ್ಯೆ ನಿವಾರಣೆ ಮಾಡಿ ರೈತರನ್ನು ಬಲವರ್ಧನೆ ಮಾಡುವ ಕೆಲಸ ಸರ್ಕಾರದಿಂದ ಆಗಬೇಕು. ದಿನದ ಎಂಟು ಗಂಟೆ ದುಡಿಯುವವರಿಗೆ ಕನಿಷ್ಠ ಸಂಬಳ ಇರುತ್ತದೆ. ಆದರೆ, ಇಡೀ ದಿನ ದುಡಿಯುವ ರೈತನಿಗೆ ನಿರ್ದಿಷ್ಟ ಆದಾಯ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಬಿ.ಸುರೇಶ್ಗೌಡ, ‘ಅರಣ್ಯ ಸಂಪತ್ತನ್ನು ಮುಂದಿನ ಪೀಳಿಗೆಗೆ ರಕ್ಷಿಸಬೇಕು. ಅರಣ್ಯವಿದ್ದರೆ ಉತ್ತಮ ಮಳೆ, ಬೆಳೆ ಸಾಧ್ಯ. ಮನುಷ್ಯರಂತೆ ಪ್ರಾಣಿಪಕ್ಷಿಗಳು ಬದುಕಲು ಅರಣ್ಯ ಬೇಕು. ಎಲ್ಲ ಜೀವ ವೈವಿಧ್ಯತೆ ಉಳಿಸಿಕೊಂಡು ನಾವೂ ಉಳಿಯಬೇಕು ಆಗಲೇ ಪ್ರಕೃತಿಯ ಸಮತೋಲನ ಸಾಧ್ಯ’ ಎಂದು ತಿಳಿಸಿದರು.
ಸಾಮಾಜಿಕ ಹೋರಾಟಗಾರ್ತಿ ಬಿ.ಟಿ.ಲಲಿತಾ ನಾಯಕ್, ‘ಸಂಕಷ್ಟದಲ್ಲಿರುವ ರೈತ ಸಮೂಹವನ್ನು ಉಳಿಸಬೇಕು. ಸರ್ಕಾರ ಅವರಲ್ಲಿ ಶಕ್ತಿ ತುಂಬಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಕಾಳಜಿ ತೋರಬೇಕು. ರೈತರಿಗೆ ಮೋಸ ಆಗುವುದನ್ನು ತಡೆಯಬೇಕು’ ಎಂದು ಹೇಳಿದರು.
ಸಮಿತಿ ಸಂಸ್ಥಾಪಕ ಎಲ್.ರಮೇಶ್ ನಾಯಕ್, ಸಮಿತಿ ಅಧ್ಯಕ್ಷ ಬಂಡಿಹಳ್ಳಿ ರವೀಂದ್ರಕುಮಾರ್, ಹೈಕೋರ್ಟ್ ವಕೀಲ ಆರ್.ಸುಬ್ರಹ್ಮಣ್ಯ, ಮುಖಂಡರಾದ ಲಕ್ಷ್ಮಿಶ, ನರಸಿಂಹಮೂರ್ತಿ, ಪುಟ್ಟರಾಜು ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.