ತುಮಕೂರು: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಜಾರಿ ಮಾಡದೆ, ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಆರ್.ಕೆ.ಶ್ರೀನಿವಾಸ್ ಆರೋಪಿಸಿದ್ದಾರೆ.
ಈಗಿನ ಶಿಕ್ಷಣ ಪದ್ಧತಿಯು ಪ್ರಗತಿಗೆ ವಿರೋಧವಾಗಿದೆ. ಕೌಶಲ, ಉದ್ಯೋಗ ಮತ್ತು ಜ್ಞಾನಾಧಾರಿತ ಸೇರಿದಂತೆ ಎಲ್ಲರನ್ನೂ ಎನ್ಇಪಿ ಒಳಗೊಂಡಿತ್ತು. ಅಂಗನವಾಡಿಯಿಂದ ವಿಶ್ವವಿದ್ಯಾಲಯ ಮಟ್ಟದವರೆಗೂ ವ್ಯಕ್ತಿಯ ಸರ್ವತೋಮುಖ ವಿಕಾಸಕ್ಕಾಗಿ ಗುಣಾತ್ಮಕ ಶಿಕ್ಷಣ ಪದ್ಧತಿಯನ್ನು ಇದು ಒಳಗೊಂಡಿದೆ. ಇದನ್ನು ಕಾಂಗ್ರೆಸ್ ಸರ್ಕಾರ ಕೇವಲ ರಾಜಕೀಯ ಸಂಕುಚಿತ ನೆಲೆಯಲ್ಲಿ ವಾಪಸ್ ಪಡೆದಿರುವುದನ್ನು ಖಂಡಿಸಿದ್ದಾರೆ.
ಈಗಾಗಲೇ ಪದವಿ ಹಂತದಲ್ಲಿ ಜಾರಿಯಲ್ಲಿರುವ ಒಂದು ಪ್ರಯೋಗಶೀಲ ಶಿಕ್ಷಣ ಪದ್ಧತಿಯನ್ನು ಬದಲಾವಣೆ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡಲು ಹೊರಟಿದೆ. ಎನ್ಇಪಿ ಜಾರಿ ಮಾಡಿದ ಪರಿಣಾಮವಾಗಿ ನೂರಾರು ಕೋಟಿ ಹಣವನ್ನು ಪ್ರಧಾನ ಮಂತ್ರಿ ಉಷಾ ಯೋಜನೆಯಡಿ ಕೇಂದ್ರ ಸರ್ಕಾರವು ರಾಜ್ಯದ ವಿಶ್ವವಿದ್ಯಾಲಯಗಳಿಗೆ ನೀಡಿದೆ. ಎನ್ಇಪಿ ರದ್ದುಪಡಿಸಿದರೆ ವಿ.ವಿಗಳಿಗೆ ಬರುತ್ತಿದ್ದ ಅನುದಾನವನ್ನು ರಾಜ್ಯ ಸರ್ಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಶಿಕ್ಷಣದ ದಿಕ್ಕುದೆಸೆ ಗೊತ್ತಿಲ್ಲದ, ಕನ್ನಡವನ್ನು ಓದಲು ಬಾರದವರು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವರಾಗಿದ್ದಾರೆ. ಇಂತಹವರಿಂದ ಎಸ್ಎಸ್ಎಲ್ಸಿ ಫಲಿತಾಂಶ ಕುಸಿದಿದೆ. ಇದು ಶಿಕ್ಷಣ ಕ್ಷೇತ್ರದ ಕಳಪೆ ಗುಣಮಟ್ಟ ತೋರಿಸುತ್ತದೆ. ಪಠ್ಯ ಪುಸ್ತಕದಲ್ಲಿನ ಕೆಲವು ಪಾಠಗಳನ್ನು ಕಿತ್ತುಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.