ತಿಪಟೂರು: ನಗರದ ಅಂಬೇಡ್ಕರ್ ವೃತ್ತದ ಬಳಿಯಿರುವ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ವಸತಿ ನಿಲಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳು ಗುದ್ದಲಿ, ಹಾರೆ ಹಿಡಿದು ಭಾನುವಾರ ಕಾರ್ಮಿಕರಂತೆ ಕೆಲಸ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಹಿನ್ನೆಲೆಯಲ್ಲಿ ವಸತಿ ನಿಲಯಕ್ಕೆ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.
ಕೊಠಡಿ ಸಮಸ್ಯೆ ಇರುವ ಕಾರಣ ಒಂದೇ ಕೊಠಡಿಯಲ್ಲಿ ಗುದ್ದಲಿ, ಹಾರೆ, ಮುರಿದು ಹೋಗಿರುವ ಮಂಚ, ಹರಿದ ಹಾಸಿಗೆ, ಅನುಪಯುಕ್ತ ವಸ್ತುಗಳನ್ನು ಇಡಲಾಗಿದೆ. ಅಲ್ಲಿಯೇ ಹಾಸ್ಟೆಲ್ ಸಂಬಂಧಿಸಿದ ಅಕ್ಕಿಯನ್ನು ಶೇಖರಣೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಈಗಾಗಲೇ ಭೋಜನಾಲಯಕ್ಕೆ, ಶೌಚಾಲಯಕ್ಕೆ ₹30 ಲಕ್ಷ ಅನುದಾನ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದರು.
ಹಾಸ್ಟೆಲ್ ಉಗ್ರಾಣದ ಕೋಠಡಿಯ ಚಾವಣಿ ಗೋಡೆಗಳು ಕುಸಿದು ಚೀಲದ ಮೇಲೆ ಮಣ್ಣು ಬೀಳುತ್ತಿದೆ. ವಿದ್ಯಾರ್ಥಿಗಳಿಗೆ ಕೊಟ್ಟಿರುವ ಹಾಸಿಗೆ, ತಲೆದಿಂಬು ಹರಿದು ಹೋಗಿದೆ. ಕೊಠಡಿಗಳಿಗೆ ಸರಿಯಾದ ವಿದ್ಯುತ್ ಸಂಪರ್ಕ ವ್ಯವಸ್ಥೆ ಇಲ್ಲದೆ ಸಮಸ್ಯೆಗಳ ಮಧ್ಯೆ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಇರುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.