ತುರುವೇಕೆರೆ: ಶಿಕ್ಷಕರು ಮಕ್ಕಳಿಗೆ ಪಠ್ಯ ವಿಷಯ ಜತೆ ಜತೆಯಲ್ಲೇ ಮಾನವೀಯ ಹಾಗೂ ನೈತಿಕ ಮೌಲ್ಯ ಕಲಿಸಿಕೊಡಬೇಕು ಎಂದು ಹುಲ್ಲೇಕೆರೆ ಬಸವೇಶ್ವರ ವಿದ್ಯಾವರ್ಧಕ ಸಂಘದ ನಿಕಟಪೂರ್ವ ಕಾರ್ಯದರ್ಶಿ ಎಚ್.ಎನ್.ಮಹದೇವಯ್ಯ ಅಭಿಪ್ರಾಯಪಟ್ಟರು.
ದೊಂಬರನಹಳ್ಳಿ ಸೋಮೇಶ್ವರ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾವಂತ ಮಕ್ಕಳಿಗೆ ನೋಟ್ ಬುಕ್, ಲೇಖನ ಸಾಮಗ್ರಿ ವಿತರಣೆ ಹಾಗೂ ವಿವಿಧ ಕಲಾ ಸಂಘಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲಿತ ವಿದ್ಯೆ ಕೇವಲ ತುತ್ತಿನ ಚೀಲ ತುಂಬಿಸಲು ಮಾತ್ರ ಸೀಮಿತವಾಗದೆ ಸಮಾಜದಲ್ಲಿ ನೊಂದವರ, ಅಸಹಾಯಕರ, ಬಡವರ, ಕೂಲಿಕಾರ್ಮಿಕರ ನೋವಿಗೆ ಧ್ವನಿಯಾಗಬೇಕು. ಆಂಗ್ಲಭಾಷೆ ವ್ಯಾಮೋಹ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡಿಸುವವರ ಸಂಖ್ಯೆ ಕ್ಷೀಣಿಸುತ್ತಿದ್ದು ಕನ್ನಡ ಶಾಲೆಗಳ ಉಳಿವಿಗೆ ಹೋರಾಟ ಮಾಡಬೇಕಿದೆ ಎಂದರು.
ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಸರ್ಕಾರ 2015 ನಂತರದಿಂದ ಹೊಸ ನೇಮಕಾತಿಗೆ ಅವಕಾಶ ನೀಡಿಲ್ಲ. ಇದರಿಂದ ವಿದ್ಯಾರ್ಥಿಗಳ ಕಲಿಕೆ ಹಿನ್ನೆಡೆ ಆಗಲಿದೆ. ಸರ್ಕಾರ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ನೇಮಕಾತಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಹುಲ್ಲೇಕೆರೆ ಸಮಾಜ ಸೇವಕ ಎಚ್.ಬಿ.ಗಂಗಾಧರಯ್ಯ ಮಾತನಾಡಿ, ಹಳ್ಳಿಗಾಡಿನ ಪ್ರದೇಶದಲ್ಲಿ ಸಾಕಷ್ಟು ಪ್ರತಿಭಾವಂತ ಮಕ್ಕಳಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳು ಓದಿನಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಆರ್ಥಿಕ ನೆರೆವು ಸಿಕ್ಕರೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲಿದ್ದಾರೆ ಎಂದರು.
ಹುಲ್ಲೇಕೆರೆ ಬಸವೇಶ್ವರ ವಿದ್ಯಾವರ್ಧಕ ಸಂಘದ ಹಾಲಿ ಕಾರ್ಯದರ್ಶಿ ಎಚ್.ಬಿ.ಪ್ರಸನ್ನ, ಸೌಜನ್ಯ ಪ್ರಸನ್ನ, ಎಸ್ಡಿಎಂಸಿ ಅಧ್ಯಕ್ಷ ಎಚ್.ಬಿ.ರಂಗಸ್ವಾಮಿ, ಮುಖ್ಯ ಶಿಕ್ಷಕ ಬಿ.ಎಸ್.ಶಾಂತರಾಜು, ಗ್ರಾಮ ಪಂಚಾಯಿತಿ ಸದಸ್ಯ ಬೋಜಣ್ಣ, ಹಿರಿಯ ವಿದ್ಯಾರ್ಥಿ ಸಿದ್ದಣ್ಣ, ಧನಂಜಯ್ಯ, ನಿವೃತ್ತ ಶಿಕ್ಷಕರಾದ ಎಸ್.ಆರ್.ವಿಜಯಕುಮಾರ್, ಡಿ.ಆರ್.ನರಸಿಂಹಮೂರ್ತಿ, ಶಿಕ್ಷಕರಾದ ದೊಡ್ಡಮನೆಕೀರ್ತಿ, ವೈ.ಜಿ.ಕೃಷ್ಣ, ನಾಗೇಶ್, ತಿಲೋತ್ತಮ ನಾಯಕ್, ರಮೇಶ್, ಅನಿಲ್, ರವಿ ಮಕ್ಕಳು ಮತ್ತು ಪೋಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.