ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಚೇಳೂರು ಠಾಣಾ ವ್ಯಾಪ್ತಿಯ ತೋಟದಪಾಳ್ಯ ಗ್ರಾಮದಲ್ಲಿ ಇಬ್ಬರು ಅಪರಿಚಿತರು ತೋಟದ ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ವಂಚಿಸಿ, ಪ್ರಜ್ಞೆ ತಪ್ಪಿಸಿ, ಹಣ, ಒಡವೆ ದೋಚಿದ್ದಾರೆ.
ಗ್ರಾಮದ ಗೋವಿಂದರಾಜು ಅವರ ತೋಟದ ಮನೆಯಲ್ಲಿ ಅವರ ಪತ್ನಿ ಕೀರ್ತನ ಮಂಗಳವಾರ ಮಧ್ಯಾಹ್ನ ಒಂಟಿಯಾಗಿದ್ದಾಗ ಅಪರಿಚಿತರಿಬ್ಬರು ಮಕ್ಕಳಿಗೆ ವ್ಯಾಕ್ಸಿನ್ ಹಾಕುತ್ತೇವೆ ಎಂದು ಹೇಳಿಕೊಂಡು ಲಸಿಕೆ ಹಾಕಿರುವ ಪುಸ್ತಕ ಪರಿಶೀಲಿಸಬೇಕು ಎಂದು ನಂಬಿಸಿದ್ದಾರೆ. ಕೀರ್ತನ ಲಸಿಕೆ ಪುಸ್ತಕ ತಂದು ಕೊಡುವ ಸಂದರ್ಭದಲ್ಲಿ ಕೆಳಗೆ ಬಿದ್ದಿದ್ದು ಅದನ್ನು ತೆಗೆದುಕೊಳ್ಳಲು ಬಗ್ಗಿದ್ದಾರೆ. ಆಗ ಅಪರಿಚಿತರು ಕೀರ್ತನ ಅವರ ತಲೆ ಮೇಲೆ ಕೈ ಇಟ್ಟಿದ್ದರಿಂದ ಪ್ರಜ್ಞೆ ತಪ್ಪಿದ್ದಾರೆ.
ಅಪರಿಚಿತರು ಮನೆ ಒಳಗೆ ನುಗ್ಗಿ ಕಪಾಟಿನಲ್ಲಿದ್ದ ಹಣ, ಒಡವೆ ದೋಚಿದ್ದಾರೆ ಎಂದು ಕೀರ್ತನ ಹಾಗೂ ಅವರ ಪತಿ ಗೋವಿಂದರಾಜು ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಚೇಳೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ. ಅಪರಿಚಿತರ ಪತ್ತೆಗೆ ವಿಶೇಷ ತಂಡ ರಚಿಸಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.