ತುಮಕೂರು: ಜನ ಕಲ್ಯಾಣ ಟ್ರಸ್ಟ್, ಕೊಡಗಿನ ರಂಗಭೂಮಿ ಟ್ರಸ್ಟ್ ವತಿಯಿಂದ ಫೆ. 15ರಂದು ಸಂಜೆ 6 ಗಂಟೆಗೆ ನಗರದ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ವೀರ ಸಾವರ್ಕರ್ ಕುರಿತ ‘ಕರಿನೀರ ವೀರ’ ನಾಟಕ ಪ್ರದರ್ಶನಗೊಳ್ಳಲಿದೆ.
‘ರಾಜ್ಯದಾದ್ಯಂತ ಈಗಾಗಲೇ 29 ಪ್ರದರ್ಶನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ನಗರದಲ್ಲಿ 30ನೇ ಪ್ರದರ್ಶನ ಏರ್ಪಡಿಸಲಾಗಿದೆ. ಎಲ್ಲ ಕಡೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ’ ಎಂದು ನಾಟಕದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಇಲ್ಲಿ ಬುಧವಾರ ತಿಳಿಸಿದರು.
ವೀರ ಸಾವರ್ಕರ್ ಬಗ್ಗೆ ಜನರಿಗೆ ನಿಜವಾದ ಇತಿಹಾಸ ತಿಳಿಸುವ ಉದ್ದೇಶದಿಂದ ನಾಟಕ ರಚಿಸಲಾಗಿದೆ. ಸಾವರ್ಕರ್ ಒಬ್ಬ ಶ್ರೇಷ್ಠ ವ್ಯಕ್ತಿ. ರಾಜಕೀಯ ಕಾರಣಕ್ಕೆ ಅವರ ಮೇಲೆ ರಾಡಿ ಚೆಲ್ಲುವ, ಅವಮಾನಿಸುವ, ಅವರ ಜೀವನದ ಬಗ್ಗೆ ಓದಿಕೊಳ್ಳದೆ, ಉದ್ದೇಶ ಪೂರ್ವಕವಾಗಿ ಟೀಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ‘ನಾನು ಸಾವರ್ಕರ್ ಅವರ ಪಠ್ಯವನ್ನು ಕಿತ್ತು ಬಿಸಾಡಿದ್ದೇನೆ’ ಎಂಬ ಹೇಳಿಕೆ ಕೊಟ್ಟಿದ್ದಾರೆ. ನಾವು ಸಾವರ್ಕರ್ ಅವರ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ. ಪಠ್ಯದಿಂದ ತೆಗೆದರೂ ಜನ ಮಾನಸದಲ್ಲಿ ಉಳಿಸುತ್ತೇವೆ. ಸಾವರ್ಕರ್ ರಾಷ್ಟ್ರೀಯತೆ ಕಲ್ಪನೆ ಕಟ್ಟಿ ಕೊಡುವಂತಹ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ರಾಜಕೀಯ ಉದ್ದೇಶಕ್ಕಾಗಿ, ಜನರ ಮತಕ್ಕಾಗಿ ಅವರನ್ನು ದೂಷಿಸುತ್ತಿದ್ದಾರೆ ಎಂದು ಟೀಕಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜನಕಲ್ಯಾಣ ಟ್ರಸ್ಟ್ನ ಕಾರ್ಯದರ್ಶಿ ಗೋವಿಂದರಾವ್, ಅನಿತಾ ಕಾರ್ಯಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.