ಪಟ್ಟನಾಯಕನಹಳ್ಳಿ: ಶಿರಾ ತಾಲ್ಲೂಕಿನ ನಾದೂರು ಪ್ರಾಥಮಿಕ ಸಹಕಾರ ಸಂಘದ ಆಡಳಿತ ಮಂಡಳಿ ಆಯ್ಕೆ ಸಂಬಂಧ ಜೂನ್ 30ರಂದು ನಿಗದಿಯಾಗಿದ್ದ ಚುನಾವಣೆಯನ್ನು ಹಣದ ಅಭಾವದಿಂದ ಮುಂದೂಡಲಾಗಿದೆ.
ಚುನಾವಣೆ ನಡೆಸಲು ₹30 ಸಾವಿರ ಮುಂಗಡ ಪಾವತಿಸುವಂತೆ ಚುನಾವಣಾಧಿಕಾರಿ ಇಂದಿರಮ್ಮ ಅವರು ಸಂಘದ ಮುಖ್ಯ ಪ್ರವರ್ತಕರಿಗೆ ನೋಟಿಸ್ ನೀಡಿದ್ದರು. ಸಂಘದಲ್ಲಿ ಹಣಕಾಸು ಕೊರತೆಯಿದೆ ಎಂದು ಮುಖ್ಯ ಪ್ರವರ್ತಕರು ನೊಟೀಸ್ಗೆ ಉತ್ತರಿಸಿದ್ದರು. ಹೀಗಾಗಿ ಚುನಾವಣೆ ಮುಂದೂಡಿ ಚುನಾವಣಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.
ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ 41 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ ಯಾರೂ ನಾಮಪತ್ರ ಹಿಂಪಡೆದಿಲ್ಲ. ಚುನಾವಣೆ ಪ್ರಕ್ರಿಯೆ ನಡೆಸಲು ಹಣದ ಅಭಾವದಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಸಂಘದ ನೋಟಿಸ್ ಬೋರ್ಡ್ನಲ್ಲಿ ಅಂಟಿಸಲಾಗಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಹಕಾರ ಸಂಘಗಳು ವಿಭಜನೆಯಾಗಿ ಹೊಸದಾಗಿ ಅಸ್ತಿತ್ವಕ್ಕೆ ಬರುವ ಸಹಕಾರ ಸಂಘಗಳಿಗೆ ಸೂಕ್ತ ಹಣಕಾಸು ವ್ಯವಸ್ಥೆ ಆಗದ ಹೊರತು ಚುನಾವಣಾ ಪ್ರಕ್ರಿಯೆಗೆ ಅನುಮತಿ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಂಘದ ಷೇರುದಾರರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.