ADVERTISEMENT

ದಾರಿ ತಪ್ಪಿದ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ: ಸಚಿವ ಜಿ.ಪರಮೇಶ್ವರ ಆತಂಕ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2023, 5:54 IST
Last Updated 31 ಡಿಸೆಂಬರ್ 2023, 5:54 IST
<div class="paragraphs"><p>ತುಮಕೂರಿನಲ್ಲಿ ಶನಿವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನದ ಅಧ್ಯಕ್ಷ ಎಚ್‌.ಎಸ್‌.ಶಿವಪ್ರಕಾಶ್‌ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ಸಚಿವರಾದ ಜಿ.ಪರಮೇಶ್ವರ, ಕೆ.ಎನ್‌.ರಾಜಣ್ಣ, ಶಾಸಕರಾದ ಬಿ.ಸುರೇಶ್‌ಗೌಡ  ಮೊದಲಾದವರು ಪಾಲ್ಗೊಂಡಿದ್ದರು</p></div>

ತುಮಕೂರಿನಲ್ಲಿ ಶನಿವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನದ ಅಧ್ಯಕ್ಷ ಎಚ್‌.ಎಸ್‌.ಶಿವಪ್ರಕಾಶ್‌ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ಸಚಿವರಾದ ಜಿ.ಪರಮೇಶ್ವರ, ಕೆ.ಎನ್‌.ರಾಜಣ್ಣ, ಶಾಸಕರಾದ ಬಿ.ಸುರೇಶ್‌ಗೌಡ ಮೊದಲಾದವರು ಪಾಲ್ಗೊಂಡಿದ್ದರು

   

ತುಮಕೂರು: ಜಿಲ್ಲೆಯ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಇತ್ತೀಚೆಗೆ ದಾರಿ ತಪ್ಪುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಇಲ್ಲಿ ಶನಿವಾರ ಆತಂಕ ವ್ಯಕ್ತಪಡಿಸಿದರು.

ನಗರದ ಗಾಜಿನಮನೆಯಲ್ಲಿ ಎರಡು ದಿನಗಳಿಂದ ನಡೆದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ADVERTISEMENT

ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಜಿಲ್ಲೆ ಹೆಸರಾಗಿದೆ. ಆದರೆ ಇತ್ತೀಚೆಗೆ ಯಾಕೋ, ಏನೋ ದಾರಿ ತಪ್ಪಿಸಿಕೊಳ್ಳುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಸಾಹಿತ್ಯ, ಸಂಸ್ಕೃತಿಗೆ ಹೆಚ್ಚಿನ ಉತ್ತೇಜನ ನೀಡಬೇಕು. ಬೇರೆ ಭಾಷೆಗಳು ನಮ್ಮ ಜೀವನಕ್ಕೆ ಸಹಾಯ ಆಗಬಹುದು. ಆದರೆ ಕನ್ನಡ ತಾಯಿ‌ ಭಾಷೆಯಂತೆ. ಅದನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಈ ಹಿಂದಿನ ಸರ್ಕಾರ ವಿಶ್ವವಿದ್ಯಾಲಯಕ್ಕೆ ಹಣ ಕೊಡದೆ ‘ಹಾಗೆ ಸಾಯಲಿ’ ಎಂದು ಬಿಟ್ಟಂತೆ ಕಾಣುತ್ತಿದೆ. ಈಗ ಹೆಚ್ಚಿನ ಅನುದಾನ ತಂದು ಸಮಗ್ರವಾಗಿ ವಿ.ವಿಯ ಹೊಸ ಕ್ಯಾಂಪಸ್‌ ಅಭಿವೃದ್ಧಿ ಮಾಡಲು ಶ್ರಮಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ, ‘ಕನ್ನಡ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೆಲವರು ಸಭೆಗಳಲ್ಲಿ ಕನ್ನಡ ಬಗ್ಗೆ ಮಾತನಾಡಿ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಸೇರಿಸುತ್ತಾರೆ. ಮಕ್ಕಳಿಗೆ ಪ್ರಾಥಮಿಕ ಭಾಷೆಯಾಗಿ ಕನ್ನಡ ಕಲಿಸಬೇಕು. ಕನ್ನಡ ಭಾಷಣಕ್ಕೆ ಸೀಮಿತವಾಗಬಾರದು. ಭಾಷೆಯ ಹಿರಿಮೆ ಹೆಚ್ಚುವಂತೆ ನಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಶಾಸಕ ಬಿ.ಸುರೇಶ್‌ಗೌಡ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದ್ ಎಂ.ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮುಖಂಡರಾದ ಜಿ.ಚಂದ್ರಶೇಖರಗೌಡ, ಇಕ್ಬಾಲ್ ಅಹ್ಮದ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ಸಿದ್ಧಲಿಂಗಪ್ಪ ಇತರರು ಪಾಲ್ಗೊಂಡಿದ್ದರು.

ಕನ್ನಡ ಬದುಕಿಗೆ ಬರಲಿ: ಬರಗೂರು
‘ಕನ್ನಡ ಭಾಷೆ ನಾಮಫಲಕ ಮೀರಿ ಬದುಕಿಗೆ ಬರಬೇಕು. ಕನ್ನಡದ ಮುಖಾಂತರ ಬದುಕು ಕಟ್ಟಿಕೊಳ್ಳಬಲ್ಲೆವು ಎಂಬ ವಾತಾವರಣ ನಿರ್ಮಿಸಬೇಕು’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು. ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ ‘ಕನ್ನಡದ ಬಗ್ಗೆ ಆದರ್ಶದ ಪಾಠಗಳನ್ನು ಹೇಳಿದರೆ ಸಾಲದು ವಾಸ್ತವ ಬೇರೆಯೇ ಇರುತ್ತದೆ. ಆದರ್ಶ ಮತ್ತು ವಾಸ್ತವದ ನಡುವಿನ ಕಂದಕ ಮುಚ್ಚಬೇಕು. ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡಬೇಕು’ ಎಂದು ಒತ್ತಾಯಿಸಿದರು. ಪ್ರಜಾಸತ್ತಾತ್ಮಕತೆ ಸಾಂಸ್ಕೃತಿಕ ಸ್ವಾಯತ್ತತೆ ಜಾತ್ಯತೀತತೆ ಈ ಮೂರು ಬಿಕ್ಕಟ್ಟಿನಲ್ಲಿವೆ. ಇಂತಹ ಸಮಯದಲ್ಲಿ ಲೇಖಕರು ಸಾಹಿತಿಗಳು ಮೌನವಾಗಿದ್ದಾರೆ ಎಂಬ ಟೀಕೆಗಳು ಕೇಳಿ ಬರುತ್ತಿವೆ. ಆದರೆ ಮೌನ ಮತ್ತು ಮಾತು ಎರಡೂ ಜಾಗೃತವಾಗಿವೆ. ಸಮಕಾಲೀನ ಸಂದರ್ಭದ ಸಂಕಷ್ಟಗಳಿಗೆ ಕನ್ನಡ ಸಾಹಿತ್ಯ ಹಿಂದಕ್ಕೆ ಸರಿದಿಲ್ಲ ಎಂದರು. ಬೌದ್ಧಿಕ ವಲಯವನ್ನು ವಿಭಜಕ ಪ್ರವೃತ್ತಿ ಆವರಿಸಿಕೊಂಡಿದೆ. ಪರಸ್ಪರ ಭೇಟಿ ಮಾಡಲು ಆಗದಂತಹ ವಿಭಜಕಗಳು ನಿರ್ಮಾಣವಾಗುತ್ತಿದೆ. ಸಾಂಸ್ಕೃತಿಕ ವಲಯದಲ್ಲಿನ ವಿಭಜಕ ಪ್ರವೃತ್ತಿ ಆತಂಕಕಾರಿ. ಪ್ರಜಾಪ್ರಭುತ್ವ ಉಳಿಯಲು ಭಿನ್ನಾಭಿಪ್ರಾಯದ ನಡುವೆ ಸಂವಾದಕ್ಕೆ ಸಾಧ್ಯವಾಗಬೇಕು.‌ ಬೌದ್ಧಿಕ ವಲಯ ವಿಭಜಕ ಮೀರಿ ಸಂವಾದಕ್ಕೆ ಸಿದ್ಧವಾಗಬೇಕು. ವಿಚಾರ ವಿನಿಮಯ ಮಾಡಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.
‘ಪಲ್ಲಕ್ಕಿ’ ಉತ್ಸವ ಬೇಡ: ಶಿವಪ್ರಕಾಶ್
‘ಸಮ್ಮೇಳನಾಧ್ಯಕ್ಷರನ್ನು ಪಲ್ಲಕ್ಕಿ‌ ಮೇಲೆ ಹೊತ್ತು ತರುವುದು ನಿಲ್ಲಿಸಬೇಕು. ಇದು ಸಾಮಂತವಾದಿ ಸಂಸ್ಕೃತಿಯ ಸಂಕೇತ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಕ್ಕೆ ಅವಕಾಶ ಇರಬಾರದು. ಅಧ್ಯಕ್ಷರು ನೆಲದ ಮೇಲೆ ನಡೆದು ಸಮ್ಮೇಳನದ ಸೇವೆ ಮಾಡಲಿ’ ಎಂಬ ಆಶಯವನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಚ್.ಎಸ್.ಶಿವಪ್ರಕಾಶ್‌ ವ್ಯಕ್ತಪಡಿಸಿದರು. ಜಿಲ್ಲೆಯ ನೆಲ ಕಲೆ ಸಂಸ್ಕೃತಿಯ ಬಗ್ಗೆ ವಿ.ವಿಯಲ್ಲಿ ಹೆಚ್ಚಿನ ಅಧ್ಯಯನಗಳಾಗಬೇಕು. ಪ್ರಾಥಮಿಕ ಶಿಕ್ಷಣದ ಜತೆಗೆ ಉನ್ನತ ಶಿಕ್ಷಣ ಮತ್ತು ವಿಜ್ಞಾನ–ತಂತ್ರಜ್ಞಾನದಲ್ಲಿ ಕನ್ನಡ ಬಳಕೆಯಾಗಬೇಕು. ಇಂಗ್ಲಿಷ್‌ ಜ್ಞಾನದ ಮೂಲ ಎಂಬ ಮೂಢನಂಬಿಕೆ ಜನರಲ್ಲಿ ಬೇರೂರಿದೆ. ಇದು ದೂರವಾಗಿ ಕನ್ನಡದ ಚಿಂತನೆ ಬೆಳೆಯಬೇಕು ಎಂದು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.