ADVERTISEMENT

ಶಿರಾ: ಹೆಚ್ಚುತ್ತಿರುವ ವಾಹನ ಸಂಖ್ಯೆ; ಸಂಚಾರ ನಿಯಮ ಲೆಕ್ಕಕ್ಕಿಲ್ಲ

ಎಚ್.ಸಿ.ಅನಂತರಾಮು
Published 1 ಜುಲೈ 2024, 7:06 IST
Last Updated 1 ಜುಲೈ 2024, 7:06 IST
ಶಿರಾದ ಅಂಬೇಡ್ಕರ್ ವೃತ್ತದಲ್ಲಿ ಸಂಚಾರ ದೀಪ ಇಲ್ಲ
ಶಿರಾದ ಅಂಬೇಡ್ಕರ್ ವೃತ್ತದಲ್ಲಿ ಸಂಚಾರ ದೀಪ ಇಲ್ಲ   

ಶಿರಾ: ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕಿರುವ ನಗರಸಭೆ ಹಾಗೂ ಪೊಲೀಸ್ ಇಲಾಖೆ ನಿರ್ಲಕ್ಷ್ಯದಿಂದಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಜಿಲ್ಲೆಯಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ಎಲ್ಲಿಯೂ ಸಂಚಾರ ದೀಪದ ವ್ಯವಸ್ಥೆ ಇಲ್ಲ. ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದರಿಂದ ವಾಹನ ನಿಲುಗಡೆ ಹಾಗೂ ರಸ್ತೆಯಲ್ಲಿ ಓಡಾಡಲು ಪಾದಚಾರಿಗಳು ಪರದಾಡುವಂತಾಗಿದೆ.

ನಗರದ ಅಂಬೇಡ್ಕರ್ ವೃತ್ತ ಹಾಗೂ ದರ್ಗಾ ವೃತ್ತದಲ್ಲಿ 10 ವರ್ಷದ ಹಿಂದೆ ತಲಾ ₹10 ಲಕ್ಷ ವೆಚ್ಚದಲ್ಲಿ ಸಂಚಾರ ದೀಪದ ವ್ಯವಸ್ಥೆ ಮಾಡಲಾಯಿತು. ಆದರೆ ಇದು ಕೆಲಸ ಮಾಡಿದ್ದು ಬೆರಳೆಣಿಕೆಯಷ್ಟು ದಿನ ಮಾತ್ರ. ಇದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಬಿಟ್ಟರೆ ಜನರಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಈಗ ಎರಡು ಕಡೆ ಕಾರಂಜಿ ನಿರ್ಮಾಣ‌ ಮಾಡಿದ್ದು, ಸಿಗ್ನಲ್ ಕಿತ್ತು ಹಾಕಲಾಗಿದೆ. ಹೊಸದಾಗಿ ಸಂಚಾರ ದೀಪದ ವ್ಯವಸ್ಥೆ ಮಾಡುವುದಾಗಿ ಹೇಳಿದರೂ ಅದು ಯಾವಾಗ ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರ ಇಲ್ಲ.

ADVERTISEMENT

ನಗರದ ಅಂಬೇಡ್ಕರ್ ವೃತ್ತ (ಐ.ಬಿ ಸರ್ಕಲ್) ಸದಾ ವಾಹನ ದಟ್ಟಣೆಯಿಂದ ಕೂಡಿದ್ದು, ಇಲ್ಲಿ ಸಿಗ್ನಲ್ ವ್ಯವಸ್ಥೆ ಇಲ್ಲದಿರುವುದರಿಂದ ವಾಹನ ಸವಾರರು ಬೇಕಾಬಿಟ್ಟಿ ಸಂಚರಿಸುತ್ತಿದ್ದು, ಹಲವು ಅಪಘಾತಗಳಿಗೆ ಕಾರಣವಾಗುತ್ತಿದೆ.

ಅಂಬೇಡ್ಕರ್ ವೃತ್ತಕ್ಕೆ ಜ್ಯೋತಿನಗರದ ಕಡೆಯಿಂದ ಪ್ರವಾಸಿ ಮಂದಿರ, ಎಪಿಎಂಸಿ, ಬುಕ್ಕಾಪಟ್ಟಣ, ನಗರಸಭೆ, ಬಸ್‌ ನಿಲ್ದಾಣದ ಕಡೆ ಸೇರಿ ಒಟ್ಟು 6 ಕಡೆಯಿಂದ ರಸ್ತೆಗಳು ಕೂಡುತ್ತಿದ್ದು ದೊಡ್ಡ ವೃತ್ತವಾಗಿದೆ. ಕಚೇರಿ, ಶಾಲೆ, ಕಾಲೇಜುಗಳಿಗೆ ಹೋಗುವವರು ಈ ರಸ್ತೆಗಳಲ್ಲಿ ಸಂಚರಿಸುವುದರಿಂದ ಸಂಚಾರ ದಟ್ಟಣೆ ಇರುತ್ತದೆ.

ಸಂಚಾರ ನಿಯಮಗಳನ್ನು ವಾಹನ ಸವಾರರು ಪಾಲನೆ ಮಾಡದಿರುವುದು ಹೆಚ್ವಿನ ಅಪಘಾತಗಳಿಗೆ ಕಾರಣವಾಗುತ್ತಿದೆ. ಅಪಘಾತಗಳನ್ನು ತಡೆಯಲು ಪೊಲೀಸರು ಮುಂಜಾಗ್ರತೆ ವಹಿಸಿ ನಗರಸಭೆ ಕಡೆಯಿಂದ ಬರುವ ವಾಹನಗಳು ನೇರವಾಗಿ ಅಂಬೇಡ್ಕರ್ ವೃತ್ತಕ್ಕೆ ಬರದೆ ಯೂ ಟರ್ನ್ ತೆಗೆದುಕೊಂಡು ಬುಕ್ಕಾಪಟ್ಟಣ ವೃತ್ತದ ಕಡೆಯಿಂದ ಬರುವಂತೆ ರಸ್ತೆಯಲ್ಲಿ ಸಿಮೆಂಟ್ ಬ್ಲಾಕ್‌ ಇಟ್ಟರೂ ಕೆಲವರು ನಿಯಮ ಪಾಲನೆ ಮಾಡದೆ ಕಿರಿದಾದ ರಸ್ತೆಯಲ್ಲಿ ಬರುತ್ತಿದ್ದಾರೆ. ಅದೇ ರೀತಿ ಜ್ಯೋತಿನಗರದ ಕಡೆಯಿಂದ ಎಪಿಎಂಸಿ ಕಡೆ ಹೋಗಲು ಕಾರಂಜಿಯನ್ನು ಬಳಸಿಕೊಂಡು ಹೋಗುವಂತೆ ಸಿಮೆಂಟ್ ಬ್ಲಾಕ್‌ ಇಟ್ಟು ಸರಪಳಿ ಹಾಕಿದ್ದರೂ ಕೆಲವರು ಸರಪಳಿ ಕಿತ್ತು ಹಾಕಿ ಸಿಮೆಂಟ್ ಬ್ಲಾಕ್‌ಗಳ ಮಧ್ಯೆ ವಾಹನಗಳನ್ನು ತೂರಿಸಿಕೊಂಡು ಹೋಗುತ್ತಾರೆ.

ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಿ: ಇಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡದ ವಾಹನ ಸವಾರರಿಗೆ ದಂಡ ವಿಧಿಸಿದರೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವರು.

ಖಾಸಗಿ ಬಸ್‌ ನಿಲ್ದಾಣ ರಸ್ತೆ, ರಾಘವೇಂದ್ರ ಸ್ವಾಮಿ ದೇವಸ್ಥಾನ ರಸ್ತೆ, ನಗರಸಭೆ ಕಚೇರಿ ರಸ್ತೆ, ಬಾಲಾಜಿ ನಗರದ ರಸ್ತೆ, ಟಿಕೆಪಿ ಲಾಡ್ಜ್ ರಸ್ತೆ ಅತ್ಯಂತ ಕಿರಿದಾಗಿದ್ದು ವಾಹನ ಸಂಚಾರ ಕಷ್ಟವಾಗಿದೆ.

ಸಂಚಾರ ಪೊಲೀಸ್ ಠಾಣೆ ಪ್ರಾರಂಭಿಸಿ: ನಗರ ಪೊಲೀಸ್ ಠಾಣೆಯ ವ್ಯಾಪ್ತಿ ಹೆಚ್ಚಿದೆ. ಸಿಬ್ಬಂದಿ ಕೊರತೆ ಮತ್ತು ಶಿರಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವುದರಿಂದ ನಗರಕ್ಕೆ ಬರುವ ಗಣ್ಯರ ಸಂಖ್ಯೆ ಹೆಚ್ಚಿದ್ದು, ಅವರಿಗೆ ಬಂದೋಬಸ್ತ್ ನೀಡಲು ಹೆಚ್ಚಿನ ಸಿಬ್ಬಂದಿಯನ್ನು ಮೀಸಲಿರಿಸಬೇಕಿದೆ. ಅದ್ದರಿಂದ ಪ್ರತ್ಯೇಕವಾಗಿ ಸಂಚಾರ ಪೊಲೀಸ್ ಠಾಣೆ ಪ್ರಾರಂಭಿಸಿದರೆ ಅನುಕೂಲವಾಗುವುದು ಎನ್ನುತ್ತಾರೆ ಸ್ಥಳೀಯರು.

ಶಾಸಕ ಟಿ.ಬಿ.ಜಯಚಂದ್ರ ಅವರು ಹಿಂದೆ ಸಚಿವರಾಗಿದ್ದಾಗ ಸಂಚಾರ ದೀಪ ಆಳವಡಿಸಲಾಗಿತ್ತು. ಅದರೆ ಇದರಿಂದ‌ ಯಾವುದೇ ಪ್ರಯೋಜನವಾಗಲಿಲ್ಲ. ಈಗ ಅವರು ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದು ಈ ಬಾರಿಯಾದರೂ ಸುಗಮ ಸಂಚಾರಕ್ಕೆ ಒತ್ತು ನೀಡುವರೆ ಎನ್ನುವುದು ಜನರ ಪ್ರಶ್ನೆ.

ನಗರಸಭೆಯಿಂದ ಬರುತ್ತಿರುವ ಆಟೊ ಯೂ ಟರ್ನ್ ತೆಗೆದುಕೊಳ್ಳದೆ ಸಂಚಾರ ನಿಯಮವನ್ನು ಗಾಳಿಗೆ ತೂರಿದೆ
ಸಂಚಾರ ದೀಪ ಆಳವಡಿಕೆ ಶೀಘ್ರ
ಅಂಬೇಡ್ಕರ್ ವೃತ್ತ ಹಾಗೂ ದರ್ಗಾ ವೃತ್ತದಲ್ಲಿ ಸಂಚಾರ ದೀಪ ಹಾಗೂ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸುವಂತೆ ಶಾಸಕರು ಸೂಚನೆ ನೀಡಿದ್ದಾರೆ. ನಗರಸಭೆಯಿಂದ ಸಹ ಈ ಬಗ್ಗೆ ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಶೀಘ್ರ ಟೆಂಡರ್ ಕರೆಯಲಾಗುವುದು. ಟೆಂಡರ್ ಪ್ರಕ್ರಿಯೆ ನಂತರ ತ್ವರಿತವಾಗಿ ಕಾಮಗಾರಿ ನಡೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ರುದ್ರೇಶ್ ಪೌರಾಯುಕ್ತ ನಗರಸಭೆ ಜಾಗೃತಿ ಮೂಡಿಸಿ ಶಿರಾ ವೇಗವಾಗಿ ಬೆಳೆಯುತ್ತಿದೆ. ಅಗತ್ಯಕ್ಕೆ ತಕ್ಕಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಸಂಚಾರ ಪೊಲೀಸ್‌ ಠಾಣೆಯ ಅವಶ್ಯಕತೆ ಹೆಚ್ಚಿದೆ. ಪ್ರತಿನಿತ್ಯ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು ಜನರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಅಪಘಾತಗಳ ತಡೆಗೆ ಪೊಲೀಸರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಎಚ್.ಗುರುಮೂರ್ತಿ ಗೌಡ ಪ್ರಧಾನ ಕಾರ್ಯದರ್ಶಿ ವಕೀಲರ ಸಂಘ ಸುಗಮ ಸಂಚಾರಕ್ಕೆ ಕ್ರಮ ಅಗತ್ಯ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಗತ್ಯ ಇರುವೆಡೆ ಸಂಚಾರ ದೀಪದ ವ್ಯವಸ್ಥೆ ಮಾಡಿ ಸುಗಮ ಸಂಚಾರದ ವ್ಯವಸ್ಥೆ ಮಾಡಬೇಕು. ಬಾಲಕರ ವಾಹನ ಚಾಲನೆ ವ್ಹೀಲಿಂಗ್‌ ಹಾಗೂ ವೇಗದ ಚಾಲನೆಗೆ ಕಡಿವಾಣ ಹಾಕಬೇಕು. ಬಿ.ಎಂ.ರಾಧಕೃಷ್ಣ ನಗರಸಭೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.