ಗುಬ್ಬಿ: ಬೀದಿನಾಯಿ ದಾಳಿಗೆ ತಾಲ್ಲೂಕಿನ ಕಡಬ ಹೋಬಳಿ, ಕಲ್ಲೂರು ಗ್ರಾಮದ (65) ವೃದ್ಧೆ ಗಂಗಮ್ಮ ಭಾನುವಾರ ತಡರಾತ್ರಿ ಮೃತಪಟ್ಟಿದ್ದಾರೆ.
ಗ್ರಾಮದಲ್ಲಿ ಕಳೆದ 20 ದಿನಗಳ ಹಿಂದೆ ಗ್ರಾಮದ ನಾಲ್ವರಿಗೆ ಬೀದಿ ನಾಯಿಯೊಂದು ತೀವ್ರವಾಗಿ ಕಡಿದು ಹಲ್ಲೆ ಮಾಡಿತ್ತು. ಎಲ್ಲರನ್ನೂ ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಗಂಗಮ್ಮ ಅವರನ್ನು ಹೊರತುಪಡಿಸಿ ಉಳಿದ ಎಲ್ಲರೂ ಚೇತರಿಸಿಕೊಂಡಿದ್ದರು.
ಗಂಗಮ್ಮ ಅವರು ತೀವ್ರ ಅಸ್ವಸ್ಥರಾಗಿದ್ದರಿಂದ ತುಮಕೂರು ನಂತರ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿದರೂ ನಿಧನರಾಗಿದ್ದರೆ. ಗ್ರಾಮದಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗಿದ್ದು ಗ್ರಾಮ ಪಂಚಾಯಿತಿಯವರು ಕೂಡಲೆ ಕ್ರಮವಹಿಸಿ ಬೀದಿನಾಯಿಗಳನ್ನು ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಾಯಿದಾಳಿಗೆ ಒಳಗಾಗಿದ್ದ ಲೋಕೇಶ್ ಮಾತನಾಡಿ, ಕಳೆದ ಕೆಲವು ತಿಂಗಳಿಂದ ಬೀದಿ ನಾಯಿಗಳು ಅಧಿಕವಾಗಿವೆ. ವೃದ್ಧರು, ಹೆಂಗಸರು, ಮಕ್ಕಳು ಗ್ರಾಮದಲ್ಲಿ ಓಡಾಡಲು ಭಯಪಡುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ತುರ್ತುಕ್ರಮ ಕೈಗೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷದಿಂದ ಈ ಘಟನೆ ಸಂಭವಿಸಿದ್ದು, ಮೃತರ ಕುಟುಂಬಕ್ಕೆ ಸೂಕ್ತಪರಿಹಾರ ನೀಡಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.