ತುಮಕೂರು: ‘ಸ್ವಾಸ್ಥ್ಯ ಸಮಾಜ ನಿರ್ಮಾಣದ ಹಿಂದೆ ಅಮ್ಮಂದಿರ ಶ್ರಮವಿದೆ. ತಾಯಿ ಮಕ್ಕಳ ಬೇಕು, ಬೇಡಗಳನ್ನು ಅರಿತು ನಿಭಾಯಿಸುವ ಮೂಲಕ ಇಡೀ ಕುಟುಂಬಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾಳೆ’ ಎಂದು ಯೋಗ ಶಿಕ್ಷಕಿ ವಸಂತ ನಾರಾಯಣಗೌಡ ಹೇಳಿದರು.
ನಗರದಲ್ಲಿ ಈಚೆಗೆ ಚುಂಚಾದ್ರಿ ಮಹಿಳಾ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಅಮ್ಮಂದಿರ ದಿನ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿ, ಅವರು ಕೇಳಿದ್ದನ್ನು ಕೊಡಿಸಿದರೆ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಶೈಕ್ಷಣಿಕ ಬೆಳವಣಿಗೆಯ ಜತೆಗೆ ಅವರ ಸ್ನೇಹಿತರ ವಲಯ, ಚಟುವಟಿಕೆಗಳ ಕಡೆಗೂ ಗಮನ ಹರಿಸಬೇಕು. ಪ್ರೀತಿಯ ಜತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯ ತುಂಬಬೇಕು. ಮಕ್ಕಳಿಗೆ ಕೈತುತ್ತು ತಿನ್ನಿಸುವುದು, ಕುಟುಂಬದ ಎಲ್ಲರು ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಕೌಟುಂಬಿಕ ವಾತಾವರಣ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದರು.
ಜಿಲ್ಲಾ ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ಅಧ್ಯಕ್ಷೆ ಸುಜಾತಾ ನಂಜೇಗೌಡ, ‘ಹೆಣ್ಣು ಒಂದು ಗಂಡಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ. ನಾಲ್ಕು ಗೋಡೆಗಳ ಮಧ್ಯದ ಜೀವನಕ್ಕೆ ಸೀಮಿತವಾಗಿದ್ದ ತಾಯಂದಿರಿಗೆ ಪ್ರಸ್ತುತ ಹಲವು ಅವಕಾಶಗಳಿವೆ. ತೊಟ್ಟಿಲು ತೂಗುವ ಕೈ ದೇಶವನ್ನು ಆಳ ಬಲ್ಲದು ಎಂಬುದನ್ನು ಹಲವಾರು ಮಹಿಳೆಯರು ಸಾಧಿಸಿ ತೋರಿಸಿದ್ದಾರೆ’ ಎಂದು ತಿಳಿಸಿದರು.
ವಿಭಕ್ತ ಕುಟುಂಬದ ಹೆಸರಿನಲ್ಲಿ ಕೌಟುಂಬಿಕ ವ್ಯವಸ್ಥೆ ಸಂಕೀರ್ಣಗೊಳ್ಳುತ್ತಿದೆ. ಇದು ಬದಲಾಗಬೇಕು. ಪರಿಸರ ಸಮತೋಲನ ನಮ್ಮೆಲ್ಲರ ಗುರಿಯಾಗಬೇಕು. ಇಲ್ಲದಿದ್ದರೆ ಪ್ರಾಕೃತಿಕ ವಿಕೋಪಗಳ ಸಂಖ್ಯೆ ಹೆಚ್ಚಾಗಿ, ಜನರು ಮತ್ತಷ್ಟು ಕೆಟ್ಟ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ಉಪಾಧ್ಯಕ್ಷೆ ಯಶೊದಮ್ಮ ವೀರಯ್ಯ, ಕಾರ್ಯದರ್ಶಿ ರೇಖಾ ಅನೂಪ್, ಖಜಾಂಚಿ ಜ್ಞಾನವಿ, ಜಂಟಿ ಕಾರ್ಯದರ್ಶಿ ಅನಸೂಯ, ನಿರ್ದೇಶಕರಾದ ನವ್ಯಾ ಪ್ರಕಾಶ್, ಸುನಂದಾ, ಪಾವರ್ತಿ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.