ಶಿರ್ವ: ಶಂಕರಪುರ ಸಾಯಿ ಮುಖ್ಯಪ್ರಾಣ ದೇವಸ್ಥಾನ ದ್ವಾರಕಾಮಯಿ ಮಠದ ಮುಖ್ಯಸ್ಥ ಸಾಯಿ ಈಶ್ವರ ಗುರೂಜಿ ಅವರ ಸಂಕಲ್ಪದಂತೆ 108 ದಿನಗಳಲ್ಲಿ 108 ದೇವಾಲಯಗಳಿಗೆ ಭೇಟಿ ನೀಡಿ, ಬಿಲ್ವ ಪತ್ರ ಗಿಡ ನೆಡುವ ಅಭಿಯಾನಕ್ಕೆ ಶುಕ್ರವಾರ ಶಂಕರಪುರ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು.
ದ್ವಾರಕಾಮಯಿ ಮಠದ ಪೀಠಾಧೀಶರಾದ ಸಾಯಿ ಈಶ್ವರ ಗುರೂಜಿ ಕಾರ್ಯಕ್ರಮ ಉದ್ಘಾಟಿಸಿ, ರಾಜ್ಯದ 108 ದೇವಾಲಯಗಳಿಗೆ ಭೇಟಿ ನೀಡಿ ಅಲ್ಲಿ ಹಿಂದೂ ಧರ್ಮದ ರಕ್ಷಣೆ, ಸೈನಿಕರಿಗೆ ಬೆಂಬಲ ಮತ್ತು ಮಹಿಳಾ ಜಾಗೃತಿಯ ಬಗ್ಗೆ ಜನ ಅಭಿಪ್ರಾಯ ಮೂಡಿಸಲಾಗುವುದು. ಅಲ್ಲದೆ, ಪ್ರತಿ ದೇವಸ್ಥಾನದಲ್ಲಿ ಬಿಲ್ವಪತ್ರೆ ಗಿಡವನ್ನು ನೆಡುವ ಕಾರ್ಯ ನಡೆಸಲಾಗುವುದು ಎಂದರು.
ಜಯಂಟ್ಸ್ ಗ್ರೂಪ್ ಫೆಡರೇಷನ್ ಮಾಜಿ ಅಧ್ಯಕ್ಷ ಮಧುಸೂದನ್ ಹೇರೂರು ಮಾತನಾಡಿ, ಬಿಲ್ವಪತ್ರೆ ಗಿಡ ಕೇವಲ ಧಾರ್ಮಿಕ ಅಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿದೆ. ಹಲವು ಗಿಡಗಳನ್ನು ನೆಡುವ ಮೂಲಕ ಪ್ರಕೃತಿಗೆ ಸಂತಸ ತರುವ ಕಾರ್ಯ ಮಾಡಬೇಕು. ಈ ನಿಟ್ಟಿನಲ್ಲಿ ಸಾಯಿ ಈಶ್ವರ ಗುರೂಜಿ ಅವರ ಈ ಕಲ್ಪನೆ ಉತ್ತಮವಾಗಿದೆ ಎಂದರು.
ಭಕ್ತರಿಗೆ ಬಿಲ್ವಪತ್ರೆ ಗಿಡಗಳನ್ನು ಹಸ್ತಾಂತರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ, ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ವೀಣಾ ಶೆಟ್ಟಿ, ವಾರಿಜಾ ಕಲ್ಮಾಡಿ, ಸತೀಶ್ ಭಾಗವಹಿಸಿದ್ದರು. ಗಿಡಗಳನ್ನು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಮತ್ತು ಸುವರ್ಣ ಎಂಟರ್ಪ್ರೈಸಸ್ ವತಿಯಿಂದ ನೀಡಲಾಯಿತು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.