ಕಾರ್ಕಳ: ತಾಲ್ಲೂಕಿನ ಬೈಲೂರು ಪರಶುರಾಮ ಥೀಂ ಪಾರ್ಕ್ ಯೋಜನೆ ಕುರಿತು ಅಪಪ್ರಚಾರ, ಸಾರ್ವಜನಿಕ ಆಸ್ತಿ – ಪಾಸ್ತಿ ಹಾನಿ, ಕಾನೂನು ಉಲ್ಲಂಘಿಸುವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿಯ ಕಾರ್ಕಳ ಮಂಡಲದಿಂದ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
‘ಈಗಾಗಲೇ ಥೀಂ ಪಾರ್ಕ್ ಯೋಜನೆ ಅನುಷ್ಠಾನಾಧಿಕಾರಿ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರನ್ನು ಅಮಾನತುಗೊಳಿಸಿರುವ ಜಿಲ್ಲಾಡಳಿತದ ಕ್ರಮ ಸ್ವಾಗತಾರ್ಹ. ಥೀಮ್ ಪಾರ್ಕ್ಗೆ ಸಾರ್ವಜನಿಕರ ಪ್ರವೇಶ ನಿಷೇಧವಿದ್ದಾಗಲೂ, ಅದನ್ನು ಉಲ್ಲಂಘಿಸಿ ಒಳಗೆ ಪ್ರವೇಶಿಸಿ ಸಾರ್ವಜನಿಕ ಸ್ವತ್ತು ಹಾನಿಗೊಳಿಸಿದವರ ವಿರುದ್ಧ, ಪ್ರತಿಮೆ ನಕಲಿ ಎಂದು ಅಪಪ್ರಚಾರ ನಡೆಸಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.
‘ಮೇ 2ರಂದು ರಾತ್ರಿ ಪರಶುರಾಮ ಥೀಂ ಪಾರ್ಕ್ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಮಣ್ಣು ಹಾಕಿ ರಸ್ತೆ ತಡೆ ಮಾಡಿ, ಕಾಮಗಾರಿಗೆ ಅಡ್ಡಿ ಪಡಿಸಿದವರ ವಿರುದ್ಧ ಜಿಲ್ಲಾಡಳಿತ ಈವರೆಗೆ ಕ್ರಮ ಕೈಗೊಂಡಿಲ್ಲ. ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಥೀಂಪಾರ್ಕ್ ಯೋಜನೆಯ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಕಾರ್ಕಳ ಬಿಜೆಪಿ ಮಂಡಳದ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ್ ಶೆಟ್ಟಿ, ಉಪಾಧ್ಯಕ್ಷ ಕಿರಣ್ ಕುಮಾರ್ ಉಡುಪಿ, ಬೋಳ ಜಯರಾಮ್ ಸಾಲ್ಯಾನ್, ಉದಯ್ ಎಸ್. ಕೋಟ್ಯಾನ್, ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ, ನಿರಂಜನ್ ಜೈನ್, ಸುರೇಶ್ ಕಾಬೆಟ್ಟು, ವಿಘ್ನೇಶ್ ರಾವ್ ಬಂಗ್ಲೆಗುಡ್ಡೆ, ರವೀಂದ್ರ ಕುಮಾರ್, ಸೂರ್ಯಕಾಂತ ಶೆಟ್ಟಿ ಕೆದಿಂಜೆ, ದೇವೇಂದ್ರ ಶೆಟ್ಟಿ ಬೆಳ್ಮಣ್, ಶಂಕರ್ ಕುಂದರ್ ಸೂಡ, ರಜತ್ರಾಮ್ ಮೋಹನ್, ಮೋಹನ್ ಶೆಟ್ಟಿ ಬೋಳ, ಸುನಿಲ್ ಪೂಜಾರಿ ಚಾರಾ, ಪ್ರಭಾಕರ್ ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.