ಬ್ರಹ್ಮಾವರ: ಕೃಷಿಮೇಳದಲ್ಲಿ ಬೈಂದೂರು ಪರಿಸರದ ರೈತರ ಮೂಕಾಂಬಿಕ ಭತ್ತ ಬೆಳೆಗಾರರ ಒಕ್ಕೂಟದ ಮಳಿಗೆ ಗಮನ ಸೆಳೆಯುತ್ತಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಂಗಳೂರಿನ ನಬಾರ್ಡ್ ಸಹಯೋಗದೊಂದಿಗೆ, ಕ್ಷೀಣಿಸುತ್ತಿರುವ ಭತ್ತ ಕೃಷಿ ಉಳಿಸುವ ದೃಷ್ಟಿಯಿಂದ ರೈತರನ್ನು ಸಂಘಟಿಸಿ, ಯಂತ್ರಗಳನ್ನು ಬಳಸಿ ಭತ್ತ ಕೃಷಿ ಮಾಡುವಂತೆ ಮಾಹಿತಿ ನೀಡಿ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಒಕ್ಕೂಟವನ್ನು ಆರಂಭಿಸಲಾಗಿತ್ತು. ಈ ಮಳಿಗೆಯಲ್ಲಿ ಸ್ಥಳೀಯ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.
ಸಂಘದ ಸಿಇಒ ರಾಜೇಂದ್ರ ಜಿ. ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, 700 ಸದಸ್ಯರುಳ್ಳ ಈ ರೈತರ ಸಂಘ ಸಣ್ಣ, ಅತಿ ಸಣ್ಣ ರೈತರಿಂದ ನರ್ಸರಿ ಗಿಡಗಳು, ಕುಚ್ಚಲಕ್ಕಿ, ಅಡಿಕೆ ತಟ್ಟೆ, ಊದುಬತ್ತಿ, ದಿನಬಳಕೆಯ ವಸ್ತುಗಳನ್ನು ತಯಾರಿ ಮಾಡಿ ಮಾರಾಟ ಮಾಡುತ್ತಿದೆ. ಪ್ರತಿಯೊಬ್ಬ ರೈತ ಸದಸ್ಯರಿಂದ ₹1 ಸಾವಿರ ಬಂಡವಾಳವನ್ನಾಗಿಸಿಕೊಂಡು ಇಂದು ವರ್ಷಕ್ಕೆ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿರುವುದು ಗಮನಾರ್ಹ. ಬಂದ ಲಾಭವನ್ನು ರೈತರಿಗೆ ನೀಡಿ, ರಿಯಾಯಿತಿ ದರದಲ್ಲಿ ಭತ್ತ ನಾಟಿ, ಕಟಾವಿಗೆ ಯಂತ್ರೋಪಕರಣಗಳನ್ನು ನೀಡುತ್ತಿದೆ. ಉತ್ತಮ ದರದಲ್ಲಿ ಭತ್ತ ಖರೀದಿಯೂ ಸಂಘದಿಂದ ಆಗುತ್ತಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಚಂದ್ರ ಪೂಜಾರಿ, ಪ್ರಬಂಧಕ ಕಿರಣ್, ಕಚೇರಿ ಸಹಾಯಕ ನಿತಿನ್, ವ್ಯಾಪ್ತಿಯ ರೈತರ ಸಹಯೋಗದೊಂದಿಗೆ ನಡೆಯುತ್ತಿರುವ ಸಂಘದ ಚಟುವಟಿಕೆಗಳು ಇತರೆ ಕೃಷಿಕರಿಗೂ ಮಾದರಿಯಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.