ADVERTISEMENT

‘ಭೋವಿ, ಸಮುದಾಯಕ್ಕೆ ಎಸ್‌ಸಿ ಪ್ರಮಾಣ ಪತ್ರ ಕಾನೂನು ಬಾಹಿರ’: ರಾಜಶೇಖರ್ ಕೋಟೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 5:52 IST
Last Updated 20 ಫೆಬ್ರುವರಿ 2023, 5:52 IST

ಉಡುಪಿ: ಜಿಲ್ಲೆಯಲ್ಲಿ ಭೋವಿ, ಪರಿವಾರ ನಾಯ್ಕ್‌ ಜಾತಿಗಳಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡಬಾರದು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಮೈಸೂರು ವಿಭಾಗೀಯ ಸಂಚಾಲಕ ರಾಜಶೇಖರ್ ಕೋಟೆ ಒತ್ತಾಯಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೋವಿ ಹಾಗೂ ಪರಿವಾರ ನಾಯ್ಕ್‌ ಜಾತಿಗಳು ಅಸ್ಪೃಶ್ಯ ಜಾತಿಗಳಲ್ಲ, ಬದಲಾಗಿ ಪ್ರವರ್ಗ 1ರಲ್ಲಿ ಬರುವ ಹಿಂದುಳಿದ ವರ್ಗಗಳಾಗಿವೆ. ಎರಡೂ ಜಾತಿಗಳ ಕುಲಶಾಸ್ತ್ರ ಅಧ್ಯಯನವಾಗಬೇಕು, ಎಸ್‌ಸಿ ಎಸ್‌ಟಿ ಆಯೋಗ ಶಿಫಾರಸ್ಸಿನ ಬಳಿಕ ಸಂಪುಟ ಅನುಮೋದನೆ ಸಿಕ್ಕು ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು.

ಈ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿದೆ ಎರಡೂ ಜಾತಿಗಳಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡುತ್ತಿರುವುದು ಕಾನೂನು ಬಾಹಿರ. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಅಧಿಕಾರಿಗಳು ಎಸ್‌ಸಿ ಜಾತಿ ಪ್ರಮಾಣ ಪತ್ರ ನೀಡಿದರೆ ದಸಂಸ ತೀವ್ರ ಪ್ರತಿಭಟನೆ ನಡಸಲಿದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಉಡುಪಿ ಜಿಲ್ಲಾ ಅಂಬೇಡ್ಕರ್ ಭವನವನ್ನು ₹ 15 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಬೇಕು, ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಬೇಕು, ₹ 10 ಕೋಟಿ ವೆಚ್ಚದಲ್ಲಿ ಕುಂದಾಪುರ ತಾಲ್ಲೂಕು ಅಂಬೇಡ್ಕರ್ ಭವನವನ್ನು ಪುನರ್ ನಿರ್ಮಿಸಬೇಕು. ಹೊರಗುತ್ತಿಗೆ ನೇಮಕಾತಿ ವೇಳೆ ರೋಸ್ಟರ್ ಪಾಲನೆಯಾಗಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಗಿಳಿಯಾರು, ಮುಖಂಡರಾದ ವಾಸುದೇವ ಮುದೂರು, ಸಂಜೀವ ಬಳ್ಕೂರು, ರಾಜು ಬೆಟ್ಟಿನಮನೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.