ADVERTISEMENT

ಬ್ರಹ್ಮಾವರ | ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 14:21 IST
Last Updated 19 ಜೂನ್ 2024, 14:21 IST
ಹನೆಹಳ್ಳಿ ಕೃಷ್ಣ ಎಂಬುವರ ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಯಿತು
ಹನೆಹಳ್ಳಿ ಕೃಷ್ಣ ಎಂಬುವರ ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಯಿತು   

ಬ್ರಹ್ಮಾವರ: ಬಾರ್ಕೂರು ಹನೆಹಳ್ಳಿ ಗ್ರಾಮದ ಮೂಡುತೋಟ ನಿವಾಸಿ, ಪರಿಶಿಷ್ಟ ಜನಾಂಗದ ಕೃಷ್ಣ ಅವರ ಕೊಲೆ ಪ್ರಕರಣ ನಡೆದು 3 ತಿಂಗಳು ಕಳೆದರೂ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ವಿಫಲವಾಗಿದೆ. ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿ ಸಮತಾ ಸೈನಿಕ ದಳದ ಆಶ್ರಯದಲ್ಲಿ ಬುಧವಾರ ಬ್ರಹ್ಮಾವರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಿಐಟಿಯು ಮುಖಂಡ ಬಾಲಕೃಷ್ಣ ಮಾತನಾಡಿ, ಅನ್ಯಾಯವಾದಾಗ ಶ್ರೀಮಂತರಿಗೆ ಒಂದು ನ್ಯಾಯ, ದಲಿತರಿಗೆ, ಬಡವರಿಗೆ ಒಂದು ನ್ಯಾಯ ಸಲ್ಲದು. ಎಂತಹ ಕೊಲೆ ಪ್ರಕರಣವನ್ನೂ ಭೇದಿಸಲಾಗುತ್ತದೆ. ಚಿಕ್ಕ ಹಳ್ಳಿಯಲ್ಲಿ ನಡೆದ ಈ ಪ್ರಕರಣ ಇನ್ನೂ ಕಂಡು ಹಿಡಿಯದಿರುವುದು ಆಶ್ಚರ್ಯಕರ ಸಂಗತಿ. ಇಲಾಖೆ ತ್ವರಿತವಾಗಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಸಮತಾ ಸೈನಿಕ ದಳ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ ಮಾತನಾಡಿ, ಹನೆಹಳ್ಳಿಯ ಪ್ರಕರಣ ಕುರಿತು ಸರಿಯಾದ ತನಿಖೆ ನಡೆಯಲೇ ಇಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆ. ಉನ್ನತ ಮಟ್ಟದ ತನಿಖೆಗಾಗಿ ಸಿಒಡಿಗೆ ನೀಡಬೇಕು. ನ್ಯಾಯ ಸಿಗುವವರೆಗೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ADVERTISEMENT

ಜಿಲ್ಲಾ ಪ್ರಧಾನ ರ್ಕಾಯದರ್ಶಿ ಶ್ರೀನಿವಾಸ ನಡೂರು, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಶಿರಿಯಾರ ಮಾತನಾಡಿದರು. ನಂತರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಆರೋಪಿಗಳನ್ನು ಬಂಧಿಸುವಂತೆ ಮನವಿ ನೀಡಲಾಯಿತು. ಸಮತಾ ಸೈನಿಕ‌ ದಳದ ಪದಾಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಇದ್ದರು.

ಮೂಡುತೋಟದ ಹನೆಹಳ್ಳಿ ಕೃಷ್ಣ ಎಂಬುವರನ್ನು ಕಳೆದ ಮಾರ್ಚ್‌ 2ರಂದು ರಾತ್ರಿ ಮನೆಯಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.