ಉಡುಪಿ: ಸಮಕಾಲೀನ ಜಗತ್ತಿನಲ್ಲಿ ಗಾಂಧಿವಾದಿ ನೈತಿಕ ಮೌಲ್ಯಗಳನ್ನು ಅನುಕರಿಸುವ ಅಗತ್ಯವಿದೆ ಎಂದು ವಿದ್ವಾಂಸ ಕೆ.ಪಿ.ರಾವ್ ಅವರು ಅಭಿಪ್ರಾಯಪಟ್ಟರು.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ನಲ್ಲಿ (ಜಿಸಿಪಿಎಎಸ್) ಗಾಂಧಿ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದು ಒಳ್ಳೆಯದು, ಅದನ್ನು ಮುಂದುವರಿಸಿಕೊಂಡು ಹೋಗಬೇಕು ಮತ್ತು ಪ್ರಸ್ತುತ ಜಗತ್ತಿನಲ್ಲಿ ಗಾಂಧಿಯ ನೈತಿಕತೆಯು ಮಹತ್ವದ್ದಾಗಿದೆ ಎಂದು ಹೇಳಿದರು.
ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಎಂ.ಕೆ. ನಾಯ್ಕ್ ಮಾತನಾಡಿ, ಮಹಾತ್ಮ ಗಾಂಧಿ ಅವರ ಜೀವನವು ಸಮಾನತೆ ಮತ್ತು ವಿಶ್ವ ದೃಷ್ಟಿಕೋನದಿಂದ ಕೂಡಿತ್ತು ಎಂದರು.
ಜಿಸಿಪಿಎಎಸ್ ಮುಖ್ಯಸ್ಥ ವರದೇಶ್ ಹಿರೇಗಂಗೆ ಮಾತನಾಡಿದರು. ಡಾ. ಭ್ರಮರಿ ಶಿವಪ್ರಕಾಶ್ ನಿರೂಪಿಸಿದರು. ಜಿಸಿಪಿಎಎಸ್ ವಿದ್ಯಾರ್ಥಿಗಳೊಂದಿಗೆ ಹಾಗೂ ಮಣಿಪಾಲದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ವಿನೂತನ ರೀತಿಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.
ಶ್ರಾವ್ಯ ಬಾಸ್ರಿ ಗಾಂಧಿ ಧುನ್ ಹಾಡಿದರು. ಭ್ರಮರಿ ಶಿವಪ್ರಕಾಶ್ ಅವರ ಭರತನಾಟ್ಯ ತರಗತಿಯನ್ನು ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಜಿಸಿಪಿಎಎಸ್ನ ವಿದ್ಯಾರ್ಥಿ ಕ್ಲಬ್ಗಳಿಗೆ ಚಾಲನೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.